ಶಿಡ್ಲಘಟ್ಟ: ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಎರಡನೇ ಕಾರ್ಮಿಕನಗರ, ಗಾಂಧಿನಗರದ ನಿವಾಸಿಗಳು ಕಳೆದ ನಾಲ್ಕು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದು, ಶಾಸಕ ವಿ.ಮುನಿಯಪ್ಪ ಮತ್ತು ರೈಲ್ವೆ ಇಲಾಖೆ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಮೌರ್ಯ ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.
ಮನವಿ ಸ್ವೀಕರಿಸಿದ ರೈಲ್ವೆ ಇಲಾಖೆ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಮೌರ್ಯ, ರೈಲ್ವೆ ಮಂಡಳಿ ಸಭೆಯಲ್ಲಿ ಮನವಿಯನ್ನು ತಿಳಿಸಿ ಕೆಳಸೇತುವೆ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಶಾಸಕ ವಿ.ಮುನಿಯಪ್ಪ, ಈ ಭಾಗದ ಜನರಿಗೆ ಕೆಳಸೇತುವೆ ಅತ್ಯಗತ್ಯ ಎಂದು ರೈಲ್ವೆ ಇಲಾಖೆಗೆ ಪತ್ರ ನೀಡುತ್ತೇನೆ ಎಂದು ಹೇಳಿದರು.
ಎ.ಆರ್.ಅಬ್ದುಲ್ ಅಜೀಜ್, ವೈ.ರಾಮಕೃಷ್ಣಪ್ಪ, ನಾರಾಯಣಸ್ವಾಮಿ, ಯೋಗಾನಂದ, ಮುನೀರ್, ಅಬ್ದುಲ್ ಸಮ್ಮದ್, ಕೆ.ಅನ್ವರ್ ಸಾಬ್, ಸನಾವುಲ್ಲ, ವೆಂಕಟಪ್ಪ, ಜಿ.ರೆಹಮಾನ್, ಸಮೀವುಲ್ಲಾ, ಕುಮಾರ್ ಇದ್ದರು.
ಬಾಲಕನಿಗೆ ಗಾಯ
ಚಿಂತಾಮಣಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹರಿದು ಎರಡು ವರ್ಷದ ಬಾಲಕನ ಬಲಗಾಲು ಮುರಿದಿರುವ ಘಟನೆ ತಾಲ್ಲೂಕಿನ ಪಾಲೇಪಲ್ಲಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಪಾಲೇಪಲ್ಲಿ ಗ್ರಾಮದ ವಾಸಿ ಶ್ರಿರಾಮ ಎಂಬುವರ ಮಗ ಯೋಗೇಶ್ ಆಟವಾಡಲು ಬರುತ್ತಿದ್ದಾಗ ಎದುರಿನಿಂದ ಬಂದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಮುಂದಿನ ಚಕ್ರಕ್ಕೆ ಸಿಲುಕಿ ಬಲಗಾಲು ಮುರಿದು ತೀವ್ರವಾಗಿ ಗಾಯಗೊಂಡಿದ್ದಾನೆ.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ರವಾನಿಸಲಾಗಿದೆ. ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಎಂ.ಎಲ್.ಕೃಷ್ಣಮೂರ್ತಿ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.