
ಚಿಕ್ಕಬಳ್ಳಾಪುರ: ವಿಶ್ವ ಶಾಂತಿ, ಮಳೆಗಾಗಿ ಪ್ರಾರ್ಥಿಸಿ ತಾಲ್ಲೂಕಿನ ಗುಂಡ್ಲುಗುರ್ಕಿ ಗ್ರಾಮಸ್ಥರು ಮಂಗಳವಾರ ಗ್ರಾಮದಲ್ಲಿ ಅದ್ಧೂರಿ ಜಾತ್ರೆ ನಡೆಸಿದರು. 14 ವರ್ಷಗಳ ಬಳಿಕ ನಡೆದ ಈ ಜಾತ್ರೆಯಲ್ಲಿ ಮಕ್ಕಳು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಗ್ರಾಮದ ಪ್ರಮುಖ ದೇವರಾದ ಗಂಗಮ್ಮ, ಸಪಲಮ್ಮ, ನರಡಮ್ಮ ಮತ್ತು ಮುನೇಶ್ವರ ಮೂರ್ತಿಗಳ ಸಮೇತ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಜಾತ್ರೆಯ ಪ್ರಯುಕ್ತ ದೀಪಗಳನ್ನು ಬೆಳಗಿಸಿದ ಮಹಿಳೆಯರು ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ನೆರವೇರಿಸಿದರು.
‘ನಮ್ಮ ಪಾಲಿಗೆ ಇದು ಅತ್ಯಂತ ಪ್ರಮುಖ ಜಾತ್ರೆ. ಇಲ್ಲಿ ಎಲ್ಲ ದೇವರ ಮೂರ್ತಿಗಳನ್ನು ವಿಶೇಷವಾಗಿ ಪೂಜಿಸುತ್ತೇವೆ. ಎಲ್ಲೆಡೆ ಶಾಂತಿ ಮತ್ತು ನೆಮ್ಮದಿ ನೆಲೆಸಲಿ ಎಂದು ಬೇಡಿಕೊಳ್ಳುತ್ತೇವೆ. ಕೃಷಿ ಚಟುವಟಿಕೆಯೇ ನಮ್ಮ ಜೀವಾಳವಾಗಿದ್ದು, ಉತ್ತಮ ಮಳೆ ತರಿಸುವಂತೆ ಪ್ರಾರ್ಥಿಸುತ್ತೇವೆ. ನಾವು ನಂಬಿದ ದೇವರು ನಮ್ಮನ್ನು ಯಾವತ್ತು ಕೈ ಬಿಟ್ಟಿಲ್ಲ. ಹಿಂದಿನ ಎಲ್ಲ ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ’ ಎಂದು ಗ್ರಾಮದ ಮುಖಂಡರು ತಿಳಿಸಿದರು.
ಜಾತ್ರೆ ಮತ್ತು ಪೂಜೆ ನೆರವೇರಿದ ಕೆಲವೇ ನಿಮಿಷಗಳಲ್ಲಿ ಮಳೆಯಾಯಿತು. ಮಳೆ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರ ಮೊಗದಲ್ಲಿ ಸಂತೋಷ ಅರಳಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.