ADVERTISEMENT

ಗ್ರಾಮದಲ್ಲಿ ಸಿಗುತ್ತಿಲ್ಲ ನೀರು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 10:25 IST
Last Updated 29 ಮಾರ್ಚ್ 2011, 10:25 IST
ಗ್ರಾಮದಲ್ಲಿ ಸಿಗುತ್ತಿಲ್ಲ ನೀರು
ಗ್ರಾಮದಲ್ಲಿ ಸಿಗುತ್ತಿಲ್ಲ ನೀರು   

ಬಾಗೇಪಲ್ಲಿ: ಬೇಸಿಗೆಯ ಸುಡು ಬಿಸಿಲು ದಾಹ ಇಂಗಿಸಿಕೊಳ್ಳಲು ಕೂಡ ನೀರು ಸಿಗದಂಥ ಪರಿಸ್ಥಿತಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ನೀರು ಪೂರೈಕೆಗಾಗಿ ಕೊಳವೆ ಬಾವಿಗಳಿದ್ದರೂ ವಿದ್ಯುತ್ ಸಮಸ್ಯೆಯ ಕಾರಣ ಎಲ್ಲೆಡೆ ನೀರು ‘ಬಂದ್’ ಆಗಿದೆ.ಬಾಗೇಪಲ್ಲಿ ಹಾಗೂ ಗುಡಿಬಂಡೆಯ ಪಟ್ಟಣಕ್ಕೆ ಮಾತ್ರ ಚಿತ್ರಾವತಿ ಬ್ಯಾರೇಜನಿಂದ ನೀರುಪೂರೈಸಿಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ಅವಲಂಬಿಸಲಾಗಿದೆ. ಅಂತರ್ಜಲ ಜರ್ರನೇ ಇಳಿಯುತ್ತಿದೆ. ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಾಡುತ್ತಿದೆ. ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ.
 

ಕುಡಿಯುವ ನೀರು ಯಾವಾಗ ಬಿಡುತ್ತಾರೆ ಎಂದು ಬೆಳಗ್ಗೆಯಿಂದ ರಾತ್ರಿಯವರಿಗೆ ಮಹಿಳೆಯರು ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ. ಒಂದು ಬಿಂದಿಗೆ ನೀರು ತುಂಬಿಸಿಕೊಳ್ಳಲು ಸಣ್ಣದಾಗಿ ಶುರುವಾಗುವ ತಂಟೆ-ತಕರಾರು ದೊಡ್ಡ ಮಟ್ಟದ ಜಗಳಕ್ಕೆ ಕಾರಣವಾಗುತ್ತಿವೆ. ದೈನಂದಿನ ಕೆಲಸಗಳನ್ನು ಬಿಟ್ಟು ನೀರಿಗಾಗಿ ಕಾಯುವುದು ಅನಿವಾರ್ಯವಾಗ ತೊಡಗಿದೆ.
ತಾಲ್ಲೂಕಿನ ಬಹುತೇಕ ಕೆರೆಕುಂಟೆಗಳು ಒಣಗಿ ಮಕ್ಕಳ ಆಟದ ಮೈದಾನಗಳಂತೆ ಪರಿರ್ವರ್ತನೆಯಾಗಿವೆ. ಕೊಳವೆ ಬಾವಿಗಾಗಿ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಕೊಳವೆ ಬಾವಿ ಕೊರೆಸಲು ಸಾಲ ಮಾಡಿದ ಬಹುತೇಕ ಮಂದಿ ಆರ್ಥಿಕ ನಷ್ಟ ಎದುರಿಸುತ್ತಿದ್ದಾರೆ.
 

ಪಟ್ಟಣದ ಪರಗೋಡು ಚಿತ್ರಾವತಿ ಬ್ಯಾರೇಜಿನಿಂದ ಕುಡಿಯುವ ನೀರನ್ನು ಶುದ್ದೀಕರಣ ಘಟಕಕ್ಕೆ ಸರಬರಾಜು ಮಾಡಲಾಗುತ್ತಿದೆ. ಆದರೆ ಪಟ್ಟಣದ ವಾರ್ಡ್‌ಗಳಿಗೆ ಸಮರ್ಪಕವಾಗಿ ನೀರು ಹರಿಸುವಲ್ಲಿ ಪುರಸಭೆ ವಿಫಲವಾಗಿದೆ. ಶುದ್ಧೀಕರಣ ಮೋಟರ್‌ಗಳು ಕೆಟ್ಟು ನಿಂತಿವೆ. 10 ರಿಂದ 15 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ.
 

ADVERTISEMENT

ಹೊಣೆ ಮರೆತ ಗ್ರಾಮ ಪಂಚಾಯಿತಿಗಳು: ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸರಿಯಾದ ರೀತಿಯಲ್ಲಿ ಕುಡಿಯುವ ನೀರು ಸರಬರಾಜಿನ ಹೊಣೆ ಹೊತ್ತ ಗ್ರಾಮ ಪಂಚಾಯಿತಿಗಳು ಸಹ ತಮ್ಮ ಜವಾಬ್ದಾರಿಯನ್ನು ಮರೆತಿವೆ. ಸಾಕಷ್ಟು ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ದುರಸ್ತಿಪಡಿಸಬೇಕಿದೆ. ಆದರೂ ಅತ್ತ ಕಡೆ ಗ್ರಾ.ಪಂ.ಗಳು ಗಮನ ಹರಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.