ADVERTISEMENT

ಚಿಂತಾಮಣಿ: ಮಡಕೆಯ ಮೆರವಣಿಗೆ

ಗದ್ದುಗೆಗೆ ಕಾದಾಟ, ಮತಕ್ಕೆ ಹೋರಾಟ-2013

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 8:28 IST
Last Updated 23 ಏಪ್ರಿಲ್ 2013, 8:28 IST

ಚಿಂಮತಾಮಣಿ: ಕಳೆದ ಐದು ವರ್ಷದಿಂದ ವಿರೋಧ ಪಕ್ಷದ ಶಾಸಕನಾಗಿದ್ದರೂ ಎರಡು ಜಿಲ್ಲೆಗಳ ಎಲ್ಲ ಕ್ಷೇತ್ರಗಳಿಗಿಂತ ಕ್ಷೇತ್ರದ ಅಬಿವೃದ್ಧಿಗೆ ಶ್ರಮಿಸಿದ್ದೇನೆ.  ವಿವಿಧ ಆಸೆ ಆಮಿಷಗಳನ್ನು ಒಡ್ಡಿ ಕ್ಷೇತ್ರದ ಮತದಾರರನ್ನು ತಪ್ಪುದಾರಿಗೆ ಎಳೆಯುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ತಾಲ್ಲೂಕಿನ ಊಲವಾಡಿ ಪಂಚಾಯಿತಿಯ ಬೂರಗಮಾಕಲಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ  ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಬೂರಗಮಾಕಲಹಳ್ಳಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿಗೆ 29 ಲಕ್ಷ, 8.5 ಲಕ್ಷ, ದೇಗುಲ ಹೊಸ ಬಡಾವಣೆಗೆ    ಸುವರ್ಣ ಗ್ರಾಮ ಯೋಜನೆಯಡಿ 20.50 ಲಕ್ಷ ರೂಪಾಯಿ ಮಂಜೂರು ಮಾಡಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮಂತ್ರ ಎಂದರು.

ಮತದಾರರಿಗೆ ಹಣವನ್ನು ಹಂಚಿ ರಾಜಕೀಯ ಮಾಡುವುದಿಲ್ಲ. ಎಲ್ಲಿಂದಲೋ ಬಂದು ಹಣದ ಆಸೆ ಆಮಿಷಗಳನ್ನು ಒಡ್ಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಹಣವಿದ್ದರೆ ಮಾತ್ರ ರಾಜಕೀಯ ಮಾಡಬಹುದು ಎಂಬ ತಪ್ಪು ಭಾವನೆ ಹೊಂದಿದ್ದಾರೆ. ಕ್ಷೇತ್ರದ್ಲ್ಲಲಿ ಪಕ್ಷಕ್ಕಿಂತ ನಾಯಕರ ಮೇಲೆ ಗೌರವ ಹೆಚ್ಚಾಗಿರುತ್ತದೆ ಎಂಬುದು ಇತಿಹಾಸದಿಂದ ಸಾಬೀತಾಗಿದೆ ಎಂದು ತಿಳಿಸಿದರು.

ADVERTISEMENT

ಕಳೆದ 4-5 ವರ್ಷಗಳಿಂದ ಸ್ತ್ರೀ ಶಕ್ತಿ ಇರುವುದು ಕೆಲವರಿಗೆ ಗೊತ್ತಿರಲಿಲ್ಲ, ಚುನಾವಣಾ ವೇಳೆ ಮಾತ್ರ ಸ್ತ್ರೀಶಕ್ತಿ ಸಂಘಗಳ ಮೇಲೆ ಎಲ್ಲಿಲ್ಲದ ಆಸಕ್ತಿ ಬಂದಿದೆ. ನಮ್ಮ ಕ್ಷೇತ್ರ ಹೆಣ್ಣುಮಕ್ಕಳು ಅಮಾಯಕರಲ್ಲ, ಕ್ಷೇತ್ರದ ಮಹಿಳೆಯರು ರೇಷ್ಮೆ ಮತ್ತು ಹೈನುಗಾರಿಕೆಯಿಂದ ಶ್ರಮಪಟ್ಟು ದುಡಿದು ಸ್ವಾಭಿಮಾನಿ ಜೀವನವನ್ನು ನಡೆಸುತ್ತಾರೆ. ಯಾರ ಹಂಗಿಗೂ ಒಳಗಾಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ಕೆಲವು ವ್ಯಕ್ತಿಗಳು ಹಣ ಕೊಡುವುದರ ಮೂಲಕ ಚಿತಾವಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸ್ವಾಭಿಮಾನಿ ಮಹಿಳೆಯರಿಗೆ ಯಾರೋ ಕೊಡುವ ಹಣದ ಮೇಲೆ ಆಸೆ ಇಲ್ಲ. ಆದರೂ ಅವರ ಮನವೊಲಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಅದು ವಿಫಲವಾಗುತ್ತದೆ. ಅವರ ಆಸೆ ಅಮಿಷಗಳಿಗೆ ಸ್ತ್ರೀಶಕ್ತಿ ಸಂಘಗಳು ಬಲಿಯಾಗುವುದಿಲ್ಲ ಎಂದು ತಿಳಿಸಿದರು.

ಮತದಾರ ಬಂಧುಗಳು ಚೆನ್ನಾಗಿ ಯೋಚಿಸಿ ಮತದಾನ ಮಾಡಬೇಕು, ವ್ಯಾಪಾರ, ವಹಿವಾಟು ಮಾಡುವಂತಹ ಜನರನ್ನು ಆರಿಸಿದರೆ ಕ್ಷೇತ್ರದಲ್ಲಿ ಇದ್ದು ಕೆಲಸ ಮಾಡುತ್ತಾರೆಯೇ ಎಂಬುದನ್ನು ಗಮನಿಸಿ. ಸದಾ ಕ್ಷೇತ್ರದಲ್ಲಿ ಇದ್ದು ಪೂರ್ಣಾವಧಿ ರಾಜಕೀಯದಲ್ಲಿ  ತೊಡಗಿ, ಅಭಿವೃದ್ಧಿ ಕಡೆಗೆ ಗಮನಹರಿಸುವ ವ್ಯಕ್ತಿಗಳನ್ನು ಆರಿಸಿಕೊಳ್ಳಿ  ಎಂದು ಮನವಿ ಮಾಡಿದರು. 

ವಿಧಾನ ಪರಿಷತ್ ಮಾಜಿ ಸದಸ್ಯ ಸುಬ್ಬಾರೆಡ್ಡಿ ಮುಖಂಡರಾದ ವಿ.ಕೃಷ್ಣಪ್ಪ (ವಿ.ಕೆ) ಮಂಜುನಾಥ್, ಸತ್ಯನಾರಾಯಣರೆಡ್ಡಿ, ರಮೇಶ, ಅಶ್ವಥರೆಡ್ಡಿ, ಪಟೇಲ್ ಶ್ರೀನಿವಾಸರೆಡ್ಡಿ, ಗ್ರಾ. ಪಂ. ಮಾಜಿ ಸದಸ್ಯ ಸೀನಪ್ಪ, ಮಂಜುನಾಥ್, ವೆಂಕಟೇಶಪ್ಪ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.