ADVERTISEMENT

ದಸರಾ ನಾಡಿನ ಸಂಸ್ಕೃತಿ ಪ್ರತೀಕ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 9:05 IST
Last Updated 18 ಅಕ್ಟೋಬರ್ 2012, 9:05 IST

ಚಿಂತಾಮಣಿ: `ನಾಡಹಬ್ಬ ದಸರಾ ನಾಡಿನ ಸಂಸ್ಕೃತಿ ಪ್ರತೀಕವಾಗಿದೆ~ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಇಲ್ಲಿ ಅಭಿಪ್ರಾಯ ಪಟ್ಟರು.ನವರಾತ್ರಿ ಪ್ರಯುಕ್ತ ತಾಲ್ಲೂಕಿನ ಪುರಾಣ ಪ್ರಸಿದ್ದ ಆಲಂಬಗಿರಿ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಬುಧವಾರ ನಡೆದ ಸಂಕೀರ್ತನಾ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನವರಾತ್ರಿಯು ಶಕ್ತಿದೇವತೆ ಆರಾಧನೆ ಹಬ್ಬವಾಗಿದೆ. ಒಂಬತ್ತು ದಿನಗಳು ಒಂದೊಂದು ದಿನವೂ ಪೂಜಿಸಲ್ಪಡುವ ಶಕ್ತಿ ಸ್ವರೂಪಿಣಿಯ ಅದ್ಭುತ ರೂಪಗಳನ್ನು ಕಲ್ಪಿಸಿಕೊಳ್ಳುವುದೇ ಅಮೋಘ ಅನುಭವ ನೀಡುತ್ತದೆ. ದೇವಿ ಪ್ರಕೃತಿಯ ಸಂಕೇತವೂ ಆಗಿದ್ದು ದಸರಾ ಹಬ್ಬ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಹಬ್ಬ ಎಂದು ಅವರು ಹೇಳಿದರು.

ರಾಜ್ಯದಲ್ಲಿ ದಸರಾ ಆರಂಭವಾದದ್ದು ವಿಜಯನಗರದ ಅರಸರ ಕಾಲದಲ್ಲಿ. ಹಬ್ಬದ ವೈಭವವನ್ನು ಮುಂದುವರಿಸಿಕೊಂಡು ಬಂದವರು ಮೈಸೂರಿನ ಒಡೆಯರು. ಹೀಗೆ ಪರಂಪರಾನುಗತವಾಗಿ ಮುಂದುವರಿಸಿಕೊಂಡು ಬಂದ ಹಬ್ಬಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮಹತ್ವದ ಸ್ಥಾನ ದೊರೆಯಿತು ಎಂದು ವಿವರಿಸಿದರು.

ನವರಾತ್ರಿ ವೇಳೆ ಧಾರ್ಮಿಕ ಚಿಂತನೆ, ನಾಮಸ್ಮರಣೆ ಮಾಡಿದಾಗ ಮನಸ್ಸಿನಲ್ಲಿ ನೆಮ್ಮದಿ, ಬದುಕಿನಲ್ಲಿ ಸಮಾಧಾನ ಉಂಟಾಗುತ್ತದೆ. ನಾಡಿನ ಪರಂಪರೆ, ಸಂಸ್ಕೃತಿ ಉಳಿವಿಗೆ ದಸರಾ ಹಬ್ಬದ ಆಚರಣೆಗಳು ಸದಾ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ದೀಪಗಳಿಂದ ಅಲಂಕೃತಗೊಂಡಿದ್ದ ದೇಗುಲದಲ್ಲಿ ಉತ್ಸವಮೂರ್ತಿಗಳನ್ನು ವಿಶೇಷ ಅಲಂಕೃತ ಮಂಟಪದಲ್ಲಿಟ್ಟು ಪೂಜಿಸಲಾಯಿತು. ಇದೇ ವೇಳೆ ವಿಶೇಷ ಪೂಜಾ ಕಾರ್ಯಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.