ADVERTISEMENT

ದೇಸಿ ಸಂಸ್ಕೃತಿಗೆ ಧಕ್ಕೆ ಯತ್ನ: ವಿಷಾದ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 7:00 IST
Last Updated 21 ಫೆಬ್ರುವರಿ 2011, 7:00 IST

ಚಿಂತಾಮಣಿ: ಆಧುನಿಕತೆಯ ಹೆಸರಿನಲ್ಲಿ ದೇಶೀಯ ಸಾಹಿತ್ಯ ಸಂಸ್ಕೃತಿಗೆ ದಕ್ಕೆ ತರುವ ಪ್ರಯತ್ನಗಳು ನಡೆಯುತ್ತಿರುವುದರ ಪರಿಣಾಮವಾಗಿ ಸಮಾಜ ಸಾಂಸ್ಕೃತಿಕವಾಗಿ ದಿವಾಳಿಯಾಗುತ್ತಿದೆ ಎಂದು ರಾಜ್ಯ ಜನಪದ ಅಕಾಡೆಮಿಯ ಸದಸ್ಯ ಶಿವಪ್ರಸಾದ್ ಅಭಿಪ್ರಾಯಪಟ್ಟರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ  ಶನಿವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಗಾಯನ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಿವೃದ್ದಿ ಮತ್ತು ನಾಗರೀಕರಣದ ಹಿನ್ನಲೆಯಲ್ಲಿ ದೇಶೀಯ ಸಾಹಿತ್ಯ, ಸಂಸ್ಕೃತಿಗೆ ಹಿನ್ನಡೆಯಾಗುತ್ತಿದ್ದು ಪಾಶ್ಚಾತ್ಯ ಸಂಸ್ಕೃತಿಗೆ ಪ್ರಧಾನ್ಯತೆ ದೊರೆಯುತ್ತಿದೆ. ಇಂದು ಸಮಾಜ ಕವಲು ದಾರಿಯಲ್ಲಿ ಸಾಗುತ್ತಿದ್ದು ಮನುಷ್ಯನ ಬದುಕಿಗೆ ಸೂರ್ಯ, ಚಂದ್ರ, ಗಾಳಿ, ನೀರು, ಎಷ್ಟು ಮುಖ್ಯವೋ ಸಂಸ್ಕೃತಿ ಮತ್ತು ಸಾಹಿತ್ಯವೂ ಅಷ್ಟೇ ಮುಖ್ಯವಾಗಿದೆ ಎಂದರು.

ಸಮಾಜದ ಬದಲಾವಣೆಯಲ್ಲಿ ಸಾಹಿತ್ಯ ಕ್ಷೇತ್ರದ ಪಾತ್ರ ಮಹತ್ವವಾದುದು. ಜಾಗತೀಕರಣದ ಪರಿಣಾಮ ನಮ್ಮ ನೆಲ, ಸಂಸ್ಕೃತಿ, ಸಾಹಿತ್ಯದ ಮೇಲೆ ಹೆಚ್ಚಾಗುತ್ತಿದ್ದು ಸಾಂಸ್ಕೃತಿಕ ದಿವಾಳಿತನ ಕಾಣಿಸಿಕೊಳ್ಳುತ್ತಿದೆ. ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ, ಪರಂಪರೆಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ದೊಡ್ಡಗಂಜೂರು ಗ್ರಾಮದ ಅಧ್ಯಕ್ಷ ನಾಗಭೂಷಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಗೃಹನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ.ಶಿವಶಂಕರ್, ನಿವೃತ್ತ ಉಪನಿರ್ದೇಶಕ ಸಿ.ಬಿ.ಹನುಮಂತಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಾಗರಾಜರಾವ್, ತಾಲ್ಲೂಕು ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ ಭಾಗವಹಿಸಿದ್ದರು.ತಾಲ್ಲೂಕಿನ ಬಹುತೇಕ ಎಲ್ಲ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಭಾವಗೀತೆ, ಜನಪದಗೀತೆ, ದೇಶಭಕ್ತಿ ಗೀತೆಗಳ ಗಾಯನ ಮಾಡಿದರು. ತೀರ್ಪುಗಾರರಾಗಿ ಶಿಡ್ಲಘಟ್ಟದ ಶಿಕ್ಷಕ ಎಂ.ಕೆಂಪಣ್ಣ, ಸಂಗೀತ ವಿದ್ವಾಂಸ ಪ್ರಕಾಶ್, ಕೆ.ಮಂಜುನಾಥ್ ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.