ADVERTISEMENT

ನಂದಿ ಸಂತೆ ನಿಷೇಧವಿದ್ದರೂ ರಾಸು ಕರೆತಂದರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2014, 5:06 IST
Last Updated 27 ಫೆಬ್ರುವರಿ 2014, 5:06 IST
ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿ ಕುಪ್ಪಳ್ಳಿ ಬಳಿ ದನಗಳ ಜಾತ್ರೆಗಾಗಿ ಬುಧವಾರ ರಾಸುಗಳೊಂದಿಗೆ ರೈತರು ಬೀಡುಬಿಟ್ಟಿದ್ದ ಸ್ಥಳಕ್ಕೆ ತಹಶೀಲ್ದಾರ್‌ ನಟೇಶ್‌, ಪಶು ವೈದ್ಯಾಧಿಕಾರಿಗಳು, ಪೊಲೀಸ್‌ ಹಾಗೂ ರೈತ ಮುಖಂಡರು ಭೇಟಿ ನೀಡಿದರು.
ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿ ಕುಪ್ಪಳ್ಳಿ ಬಳಿ ದನಗಳ ಜಾತ್ರೆಗಾಗಿ ಬುಧವಾರ ರಾಸುಗಳೊಂದಿಗೆ ರೈತರು ಬೀಡುಬಿಟ್ಟಿದ್ದ ಸ್ಥಳಕ್ಕೆ ತಹಶೀಲ್ದಾರ್‌ ನಟೇಶ್‌, ಪಶು ವೈದ್ಯಾಧಿಕಾರಿಗಳು, ಪೊಲೀಸ್‌ ಹಾಗೂ ರೈತ ಮುಖಂಡರು ಭೇಟಿ ನೀಡಿದರು.   

ಚಿಕ್ಕಬಳ್ಳಾಪುರ: ನಂದಿ ಜಾತ್ರೆಯಲ್ಲಿ ಈ ಬಾರಿ ದನಗಳ ಜಾತ್ರೆ ನಡೆಸುವಂತಿಲ್ಲ ಎಂದು ಜಿಲ್ಲಾಡಳಿತ ಕಟ್ಟಪ್ಪಣೆ ಮಾಡಿ­ದ್ದರೂ ಬುಧವಾರ ರೈತರು ರಾಸು­ಗಳೊಂದಿಗೆ ಬಂದು ಠಿಕಾಣಿ ಹೂಡಿ­ದ್ದರು. ಅವರ ಮನವೊಲಿಸಿ ಅಲ್ಲಿಂದ ಕಳು­ಹಿಸುವಷ್ಟರಲ್ಲಿ ಅಧಿಕಾರಿಗಳು ಹೈರಾಣಾದರು.

ತಾಲ್ಲೂಕಿನ ನಂದಿ ಗ್ರಾಮದ ಭೋಗ­ನಂದೀಶ್ವರಸ್ವಾಮಿ ದೇಗುಲದಲ್ಲಿ ಶುಕ್ರ­ವಾರ ಜಾತ್ರಾ ಮಹೋತ್ಸವ ಆಯೋ­ಜಿಸಲಾಗಿದೆ. ಇಲ್ಲಿ ನಡೆಯುವ ದನಗಳ ಜಾತ್ರೆಗೆ ಪ್ರಾಮುಖ್ಯವಿದೆ. ಜಿಲ್ಲೆ, ತಾಲ್ಲೂಕು, ರಾಜ್ಯದ ವಿವಿಧ ಭಾಗ­ದಿಂದ ಅಷ್ಟೇ ಅಲ್ಲ, ನೆರೆ ರಾಜ್ಯ­ಗಳಿಂದಲೂ ರಾಸುಗಳ ವ್ಯಾಪಾರಕ್ಕಾಗಿ ಇಲ್ಲಿಗೆ ಬರುತ್ತಾರೆ.

ಆದರೆ, ಈ ವರ್ಷ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ತಾರಕಕ್ಕೇರಿ, ಈಗಿನ್ನೂ ಹತೋಟಿಗೆ ಬರುತ್ತಿದೆ. ಆದ್ದ­ರಿಂದ ದನಗಳ ಜಾತ್ರೆಯನ್ನು ಕಡ್ಡಾಯ­ವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಪ್ರಕಟಣೆಯನ್ನೂ ನೀಡಲಾಗಿತ್ತು.

ಆದರೆ, ಬುಧವಾರ ಬೆಳಿಗ್ಗೆ ವಿವಿ­ಧೆಡೆಗಳಿಂದ ನಂದಿ ಹೋಬಳಿ ಕುಪ್ಪಳ್ಳಿಗೆ ರಾಸುಗಳನ್ನು ಕರೆತರಲಾಗಿತ್ತು. ಈ ಬಾರಿ ಇಂಥ ಕಾರಣಕ್ಕೆ ಜಾತ್ರೆ ನಿಷೇಧಿ­ಸಿದ್ದೇವೆ ಎಂದು ಅವರ ಮನವೊಲಿಸಿ ಹಿಂತಿರುಗುವಂತೆ ಮಾಡಲು ಅಧಿ­ಕಾರಿಗಳು ಹರಸಾಹಸ ಪಟ್ಟರು.

ಪಶು ಇಲಾಖೆ ಅಧಿಕಾರಿ ಮಾತಿಗೂ ಜನ ಕದ­ಲಲಿಲ್ಲ. ಸ್ಥಳಕ್ಕೆ ಹೋದ ಪೊಲೀಸ­ರೊಂದಿಗೂ ವಾಗ್ವಾದಕ್ಕೆ ಇಳಿದರು. ‘ದೂರದ ಊರುಗಳಿಂದ ಇದನ್ನೇ ನಂಬಿ ಬಂದಿದ್ದೇವೆ. ಇದರಿಂದ ಯಾರಿಗೇನು ಹಾನಿ’ ಎಂದು ವಾದಿಸಿದರು.

ಆಗ ತಹಶೀಲ್ದಾರ್‌ ನಟೇಶ್‌, ರೈತ ಮುಖಂಡರಾದ ಯಲುವಳ್ಳಿ ಸೊಣ್ಣೇ­ಗೌಡ, ಚನ್ನಬೈರೇಗೌಡ, ನಂದಿಬಾಬು, ಬೀಡಗಾನಹಳ್ಳಿ ಮನೋಹರ್‌, ಮುನೇ­ಗೌಡ, ಆನಂದ್‌ ಒಟ್ಟಾಗಿ ರೈತರ ಮನ­ವೊಲಿಸಿದರು. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರಾಸುಗಳನ್ನು ಇಲ್ಲಿ ತಂದಿದ್ದೀರಿ. ಗಾಳಿ ಮೂಲಕ ಹರಡುವ ವೈರಸ್‌ ಅಕಸ್ಮಾತ್‌ ತಗುಲಿದರೂ ನಿಮಗೆ ಪರಿಹಾರವೂ ಸಿಗದ ರೀತಿಯಲ್ಲಿ ನಷ್ಟ ಅನುಭವಿಸುವಿರಿ. ಯಾವ ಹಸು­ವಿಗೆ ರೋಗ ಬಂದಿದೆಯೋ ತಿಳಿ­ಯುವು­ದಿಲ್ಲ. ಆದರೆ ಒಂದರಿಂದ ಹಲವು ರಾಸು ಸಾವನ್ನಪ್ಪುತ್ತವೆ ಎಂದು ತಿಳಿ­ಹೇಳಿದರು.

ಪಶುವೈದ್ಯರೊಂದಿಗೆ ಮಾತನಾಡಿ, ಉಚಿತವಾಗಿ ನೀಡುವ ಲಸಿಕೆ ಬಗ್ಗೆ ವಿವರಿಸಿ, ರಾಸುಗಳಿಗೆ ಲಸಿಕೆ ಹಾಕಿಸಿ ವಾಪಸ್‌ ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.