ಚಿಕ್ಕಬಳ್ಳಾಪುರ: ನಂದಿ ಜಾತ್ರೆಯಲ್ಲಿ ಈ ಬಾರಿ ದನಗಳ ಜಾತ್ರೆ ನಡೆಸುವಂತಿಲ್ಲ ಎಂದು ಜಿಲ್ಲಾಡಳಿತ ಕಟ್ಟಪ್ಪಣೆ ಮಾಡಿದ್ದರೂ ಬುಧವಾರ ರೈತರು ರಾಸುಗಳೊಂದಿಗೆ ಬಂದು ಠಿಕಾಣಿ ಹೂಡಿದ್ದರು. ಅವರ ಮನವೊಲಿಸಿ ಅಲ್ಲಿಂದ ಕಳುಹಿಸುವಷ್ಟರಲ್ಲಿ ಅಧಿಕಾರಿಗಳು ಹೈರಾಣಾದರು.
ತಾಲ್ಲೂಕಿನ ನಂದಿ ಗ್ರಾಮದ ಭೋಗನಂದೀಶ್ವರಸ್ವಾಮಿ ದೇಗುಲದಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ. ಇಲ್ಲಿ ನಡೆಯುವ ದನಗಳ ಜಾತ್ರೆಗೆ ಪ್ರಾಮುಖ್ಯವಿದೆ. ಜಿಲ್ಲೆ, ತಾಲ್ಲೂಕು, ರಾಜ್ಯದ ವಿವಿಧ ಭಾಗದಿಂದ ಅಷ್ಟೇ ಅಲ್ಲ, ನೆರೆ ರಾಜ್ಯಗಳಿಂದಲೂ ರಾಸುಗಳ ವ್ಯಾಪಾರಕ್ಕಾಗಿ ಇಲ್ಲಿಗೆ ಬರುತ್ತಾರೆ.
ಆದರೆ, ಈ ವರ್ಷ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ತಾರಕಕ್ಕೇರಿ, ಈಗಿನ್ನೂ ಹತೋಟಿಗೆ ಬರುತ್ತಿದೆ. ಆದ್ದರಿಂದ ದನಗಳ ಜಾತ್ರೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಪ್ರಕಟಣೆಯನ್ನೂ ನೀಡಲಾಗಿತ್ತು.
ಆದರೆ, ಬುಧವಾರ ಬೆಳಿಗ್ಗೆ ವಿವಿಧೆಡೆಗಳಿಂದ ನಂದಿ ಹೋಬಳಿ ಕುಪ್ಪಳ್ಳಿಗೆ ರಾಸುಗಳನ್ನು ಕರೆತರಲಾಗಿತ್ತು. ಈ ಬಾರಿ ಇಂಥ ಕಾರಣಕ್ಕೆ ಜಾತ್ರೆ ನಿಷೇಧಿಸಿದ್ದೇವೆ ಎಂದು ಅವರ ಮನವೊಲಿಸಿ ಹಿಂತಿರುಗುವಂತೆ ಮಾಡಲು ಅಧಿಕಾರಿಗಳು ಹರಸಾಹಸ ಪಟ್ಟರು.
ಪಶು ಇಲಾಖೆ ಅಧಿಕಾರಿ ಮಾತಿಗೂ ಜನ ಕದಲಲಿಲ್ಲ. ಸ್ಥಳಕ್ಕೆ ಹೋದ ಪೊಲೀಸರೊಂದಿಗೂ ವಾಗ್ವಾದಕ್ಕೆ ಇಳಿದರು. ‘ದೂರದ ಊರುಗಳಿಂದ ಇದನ್ನೇ ನಂಬಿ ಬಂದಿದ್ದೇವೆ. ಇದರಿಂದ ಯಾರಿಗೇನು ಹಾನಿ’ ಎಂದು ವಾದಿಸಿದರು.
ಆಗ ತಹಶೀಲ್ದಾರ್ ನಟೇಶ್, ರೈತ ಮುಖಂಡರಾದ ಯಲುವಳ್ಳಿ ಸೊಣ್ಣೇಗೌಡ, ಚನ್ನಬೈರೇಗೌಡ, ನಂದಿಬಾಬು, ಬೀಡಗಾನಹಳ್ಳಿ ಮನೋಹರ್, ಮುನೇಗೌಡ, ಆನಂದ್ ಒಟ್ಟಾಗಿ ರೈತರ ಮನವೊಲಿಸಿದರು. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರಾಸುಗಳನ್ನು ಇಲ್ಲಿ ತಂದಿದ್ದೀರಿ. ಗಾಳಿ ಮೂಲಕ ಹರಡುವ ವೈರಸ್ ಅಕಸ್ಮಾತ್ ತಗುಲಿದರೂ ನಿಮಗೆ ಪರಿಹಾರವೂ ಸಿಗದ ರೀತಿಯಲ್ಲಿ ನಷ್ಟ ಅನುಭವಿಸುವಿರಿ. ಯಾವ ಹಸುವಿಗೆ ರೋಗ ಬಂದಿದೆಯೋ ತಿಳಿಯುವುದಿಲ್ಲ. ಆದರೆ ಒಂದರಿಂದ ಹಲವು ರಾಸು ಸಾವನ್ನಪ್ಪುತ್ತವೆ ಎಂದು ತಿಳಿಹೇಳಿದರು.
ಪಶುವೈದ್ಯರೊಂದಿಗೆ ಮಾತನಾಡಿ, ಉಚಿತವಾಗಿ ನೀಡುವ ಲಸಿಕೆ ಬಗ್ಗೆ ವಿವರಿಸಿ, ರಾಸುಗಳಿಗೆ ಲಸಿಕೆ ಹಾಕಿಸಿ ವಾಪಸ್ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.