ADVERTISEMENT

ನಗರಸಭೆ ಆಯುಕ್ತ ದಿಢೀರ್ ವರ್ಗ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 9:15 IST
Last Updated 6 ಜನವರಿ 2012, 9:15 IST

ಚಿಕ್ಕಬಳ್ಳಾಪುರ: ನಗರದಲ್ಲಿ ಗುರುವಾರ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ನಗರಸಭೆ ಆಯುಕ್ತ ಕೆ.ಎಲ್.ಬಸವ ರಾಜ್ ಅವರ ಸ್ಥಾನಕ್ಕೆ ಕೊಳ್ಳೇಗಾಲ ನಗರಸಭೆ ಆಯುಕ್ತ ಬಿ.ಡಿ.ಬಸವ ರಾಜಪ್ಪ ಅವರು ವರ್ಗವಾಗಿದ್ದಾರೆ.

ಯಾವುದೇ ಪೂರ್ವಸೂಚನೆ ಯಿಲ್ಲದೇ ಗುರುವಾರ ನಡೆದ ಈ ಅನಿರೀಕ್ಷಿತ ಬೆಳವಣಿಗೆಯು ಕೆ.ಎಲ್. ಬಸವರಾಜ್ ಅವರಿಗೆ ಸೇರಿದಂತೆ ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರಿಗೆ ಅಚ್ಚರಿ ಮೂಡಿಸಿದೆ. ವರ್ಗಾವಣೆಗೆ ಆಕ್ಷೇಪಿಸಿರುವ ಇಲ್ಲಿನ ನಗರಸಭೆ ಅಧ್ಯಕ್ಷರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದು, `ಕೆ.ಎಲ್. ಬಸವರಾಜ್ ಅವರ ವರ್ಗಾವಣೆ ವಿರುದ್ಧ ಕರ್ನಾಟಕ ನ್ಯಾಯ ಮಂಡಳಿಯ ತಡೆಯಾಜ್ಞೆ ಎಪ್ರಿಲ್‌ವರೆಗೆ ಇದೆ. ಈ ಕಾರಣದಿಂದ ನೂತನ ಆಯುಕ್ತರು ಅಧಿಕಾರಿ ಸ್ವೀಕರಿಸುವಂತಿಲ್ಲ~ ಎಂದು ತಿಳಿಸಿದ್ದಾರೆ.

ವಿವರ: ನಗರಸಭೆಯಲ್ಲಿ ಗುರುವಾರ ಕೆ.ಎಲ್.ಬಸವರಾಜ್ ಅವರು ಎಂದಿನಂತೆ ಕಾರ್ಯನಿರ್ವ ಹಿಸುತ್ತಿದ್ದರು. ಆದರೆ ವರ್ಗಾವಣೆ ಆದೇಶ ಪತ್ರವನ್ನು ತಂದ ಬಿ.ಡಿ.ಬಸವರಾಜಪ್ಪ ಅವರು ಕುರ್ಚಿ ಬಿಟ್ಟುಕೊಡುವಂತೆ ಕೋರಿದರು. ವರ್ಗಾವಣೆ ಆದೇಶಪತ್ರವನ್ನು ತೋರಿಸಿದರು.

ಇದರಿಂದ ಕೆ.ಎಲ್. ಬಸವರಾಜ್ ಅವರು ಅಚ್ಚರಿ ಗೊಳಗಾದರು. ಇಬ್ಬರು ಆಯುಕ್ತರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಸ್ಥಾನವನ್ನು ಬಿಟ್ಟುಕೊಡಬೇಕು ಎಂದು ಒಬ್ಬರು ಪಟ್ಟು ಹಿಡಿದರೆ, ಇನ್ನೊಬ್ಬರು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಆದರೆ ಕೊನೆಗೆ ಇಬ್ಬರೂ ಒಂದು ನಿರ್ಣಯಕ್ಕೆ ಬಂದು, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಲು ತೀರ್ಮಾನಿಸಿದರು.

ಬಿ.ಡಿ.ಬಸವರಾಜಪ್ಪ ಅವರು ಚಿಕ್ಕಬಳ್ಳಾಪುರಕ್ಕೆ ಹೊಸಬರೇನಲ್ಲ ಕೆಲ ವರ್ಷಗಳ ಹಿಂದೆ ಅವರು ನಗರಸಭೆ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದರು. ಕೊಳ್ಳೇಗಾಲ ನಗರಸಭೆಯಲ್ಲಿ ಅವರ ವಿರುದ್ಧ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದು, ಸರ್ಕಾರಿ ಕಾಮಗಾರಿ ಮತ್ತು ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಇದರ ಹಿನ್ನೆಲೆಯಲ್ಲಿ ಶಾಸಕರ ಶಿಫಾರಸಿನ ಮೇರೆಗೆ ಸರ್ಕಾರವು ಅವರನ್ನು ವರ್ಗ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.