ADVERTISEMENT

ನೀರಿಗಾಗಿ ಎಚ್.ಡಿ.ಕುಮಾರಸ್ವಾಮಿ ರಾಜಕೀಯ: ವಿಷಾದ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 9:25 IST
Last Updated 25 ಮಾರ್ಚ್ 2012, 9:25 IST

ಚಿಕ್ಕಬಳ್ಳಾಪುರ: ನೀರಿಗಾಗಿ ನಡೆಯುತ್ತಿರುವ ಹೋರಾಟವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ  ಎಚ್.ಡಿ.ಕುಮಾರಸ್ವಾಮಿ ಅವರ ನಡೆ ಅತ್ಯಂತ ವಿಷಾದದ ಸಂಗತಿ ಎಂದು  ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಮಾರ ಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಡಾ.ಪರಮ ಶಿವಯ್ಯನವರ ವರದಿಯನ್ನು ಅವೈಜ್ಞಾ ನಿಕ ಎಂದು ಹೇಳಿ, ಕೆ.ಸಿ.ರೆಡ್ಡಿ ಅವರ ವರದಿಯನ್ನು ಜಾರಿ ಗೊಳಿಸಲು ಮುಂದಾಗಿದ್ದರು.
 
ಪ್ರಾಂತ್ಯ ರೈತಸಂಘ ಹಾಗೂ  ಜನಪರ ಸಂಘಟನೆಗಳು ಇದರ ವಿರುದ್ಧ ಚಳವಳಿ ನಡೆಸಿದಾಗ ಲಾಟಿ ಚಾರ್ಜ್ ಮಾಡಿ ಸಲಾಗಿತ್ತು. ಆದರೆ ಈಗ `ನಮ್ಮ ಪಕ್ಷಕ್ಕೆ ಅಧಿಕಾರ ನೀಡಿ ಪರಮಶಿವಯ್ಯನವರ ವರದಿ ಜಾರಿಗೊಳಿಸುತ್ತೇವೆ~ ಎನ್ನುತ್ತಿದ್ದಾರೆ. ನಮಗೆ ನೀರಿನ ರಾಜಕೀಯ ಬೇಡ ನೀರು ಬೇಕಷ್ಟೆ ಎಂದು ಹೇಳಿದರು.

`ಶಾಶ್ವತ ನೀರಾವರಿ ಹೋರಾಟ ಸಮಿತಿ ಪಕ್ಷಾತೀತವಾಗಿ ಜಾತ್ಯತೀತವಾಗಿ ರಚನೆಯಾಗಿದೆ. ಇದಕ್ಕೆ ರಾಜಕೀಯದ ಬಣ್ಣ ಬೆರೆಸಬಾರದು. ಇದರಿಂದ ಹೋರಾಟ ಪಕ್ಷಕ್ಕೆ ಸೀಮಿತವಾಗಿ ಚಳವಳಿ ಖಾವು ಕುಂಠಿತಗೊಳ್ಳುತ್ತದೆ. ಹೋರಾ ಟಗಳು ರಾಜಕೀಯ ಮುಖಂಡರಿಂದಲ್ಲ, ಜನ ಬೀದಿಗಿಳಿದು ಚಳವಳಿ ನಡೆಸಿದಾಗ ಮಾತ್ರ ಯಶಸ್ವಿ ಯಾಗುತ್ತದೆ.

ಮುಂದಿನ ದಿನಗಳಲ್ಲಿ ನೀರಾವರಿ ಹೋರಾಟ ಜನಪರ ಹೋರಾಟವನ್ನಾಗಿ ಮಾಡಲು ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಜನರನ್ನು ಒಗ್ಗೂಡಿಸಲಾಗುವುದು. ಮನೆಗೊಬ್ಬರು ಭಾಗವಹಿಸಿದಾಗ ಮಾತ್ರ ಚಳವಳಿ ಯಶಸ್ವಿ ಯಾಗುತ್ತದೆ ಎಂದು ವಿವರಿಸಿದರು.

 ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಚಂದ್ರಾ ಯಪ್ಪ, ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಸಿ.ಗೋಪಿನಾಥ್, ಸಿಐಟಿಯು ಮುಖಂಡ ಮುನಿಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.