ADVERTISEMENT

ಪರಿಸರದ ಮೇಲೆ ಕಾಳಜಿ, ಕಳಕಳಿ ಇರಲಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 10:10 IST
Last Updated 7 ಜನವರಿ 2012, 10:10 IST

ಗೌರಿಬಿದನೂರು: ತಾಲ್ಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೆ.ನಾರಾಯಣಸ್ವಾಮಿ ಅವರ ವ್ಯಕ್ತಿತ್ವ ಮತ್ತು ಕಾರ್ಯಸಾಧನೆ ವಿಶಿಷ್ಟವಾದದ್ದು. ಜಲತಜ್ಞ ಎಂದೇ ಪ್ರಸಿದ್ಧರಾಗಿರುವ  ಅವರನ್ನು ಆಪ್ತರು `ಕೆಎಸ್‌ಎನ್~ ಎಂದೂ ಸಹ ಕರೆಯು ತ್ತಾರೆ. ಶಿಸ್ತು ಮತ್ತು ಬದ್ಧತೆ ಯನ್ನು ಮೈಗೂಡಿಸಿಕೊಂಡಿರುವ ಅವರು ಪರಿಸರ ಮತ್ತು ನೀರಿನ ರಕ್ಷಣೆ, ಸದ್ಬಳಕೆಗಾಗಿ ಮಾಡಿರುವ ಕಾರ್ಯಗಳು ಅಷ್ಟಿಷ್ಟಲ್ಲ.

ಪ್ರತಿ ದಿನ ಪುಸ್ತಕ, ಪತ್ರಿಕೆಗಳ ಓದಿಗೆ ಕೆಲ ಗಂಟೆ ಮೀಸಲಿಡುವ ಅವರು ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ ಫ್ಲೋರೈಡ್ ನೀರಿನಿಂದ ಉಂಟಾಗುವ ಅಪಾಯದ ಕುರಿತು ಹಲವು ಉಪನ್ಯಾಸಗಳನ್ನು ನೀಡಿ ಜಾಗೃತಿ ಮೂಡಿಸಿದ್ದಾರೆ. ಈಚೆಗೆ ನಡೆದ ಉತ್ತರ ಪಿನಾಕಿನಿ ಬಚಾವೋ ಆಂದೋಲನದಲ್ಲೂ ಪಾಲ್ಗೊಂಡಿದ್ದರು.

ಬಾಗೇಪಲ್ಲಿ, ಚಿಂತಾ ಮಣಿ, ಗೌರಿಬಿದನೂರು, ಕೋಟಾಲದಿನ್ನೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ನಿವೃತ್ತರಾದರು. ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಸಂದರ್ಭದಲ್ಲಿ ಅವರು `ಪ್ರಜಾವಾಣಿ~ಯೊಂದಿಗೆ ಮನಬಿಚ್ಚಿ ಮಾತನಾಡಿದರು.

* ನಿಮ್ಮ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರಿದವರು ಯಾರು?
ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿಭಾಗದ ಗೌರಿಬಿದನೂರು ತಾಲ್ಲೂಕಿನ ಹೊಸೂರಿನಲ್ಲಿ ಹುಟ್ಟಿದ ನಾನು ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದೆ. ಪದವಿ ಶಿಕ್ಷಣವನ್ನು ಬೇರೆಡೆ ಪೂರೈಸಿದೆ. ತೆಲುಗು ಮತ್ತು ಕನ್ನಡ ಸಂಸ್ಕೃತಿ ಕುರಿತು ಗಾಢಾವಾದ ಅಧ್ಯಯನ ಮಾಡಿ ಎರಡೂ ಭಾಷೆಗಳ ಸಾಹಿತ್ಯ, ವಿಚಾರ, ವಿಷಯಗಳನ್ನು ಅರಿತುಕೊಂಡೆ. ನಮ್ಮ ಊರಿನಲ್ಲೇ ಜನಿಸಿದ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ವ್ಯಕ್ತಿತ್ವ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದೆ.

* ಪರಿಸರದ ಕುರಿತು ಹೆಚ್ಚಿನ ಆಸ್ಥೆ ಹೊಂದಿರುವ ನಿಮಗೆ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
ಪರಿಸರ ರಕ್ಷಣೆ ಕುರಿತು ನಾನು ಮೊದಲಿನಿಂದಲೂ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಅಮೂಲ್ಯವಾದ ಪರಿಸರ ಹಾಳಾಗಬಾರದು. ಮುಂದಿನ ಪೀಳಿಗೆಗೂ ಸುಂದರ ನಿಸರ್ಗ ಉಳಿಯಬೇಕು ಎಂಬ ಆಶಯ ನನ್ನದು. ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುವಲ್ಲಿ ನನ್ನ ಪ್ರಾಥಮಿಕ ಶಾಲೆ ಶಿಕ್ಷಕ ವೆಂಕಟಾಚಲಯ್ಯ, ಸ್ನೇಹಿತ ಬಲರಾಮ ಗುಪ್ತಾ ಮತ್ತು ಸಾಹಿತಿ ಡಾ. ಹಂಪ ನಾಗರಾಜಯ್ಯ ಪ್ರಮುಖ ಪಾತ್ರ ವಹಿಸಿದರು. ಕೃತಿಗಳನ್ನು ಓದುವುದರ ಜೊತೆಗೆ ಬರಹವನ್ನೂ ಮೈಗೂಡಿಸಿಕೊಂಡೆ.

* ಗಡಿಪ್ರದೇಶದದಲ್ಲಿ ಕನ್ನಡಕ್ಕೆ ಅನ್ಯಭಾಷೆಗಳಿಂದ ಧಕ್ಕೆ ಇದೆಯೇ?
ಗಡಿಪ್ರದೇಶದಲ್ಲಿ ಸಹಜವಾಗಿಯೇ ಇತರ ಭಾಷೆಗಳ ಪ್ರಭಾವ ದಟ್ಟವಾಗಿರುತ್ತದೆ. ತೆಲುಗು ಭಾಷೆ ಮತ್ತು ಸಂಸ್ಕೃತಿ ಯ ಗಾಢ ಪ್ರಭಾವವಿದ್ದರೂ ಕನ್ನಡ ತನ್ನತನವನ್ನು ಉಳಿಸಿ ಕೊಂಡಿದೆ

* ನಿಮ್ಮ ಕೃತಿಗಳು ಯಾವ್ಯಾವೂ?
ತೆಲುಗುನಿಂದ ಹಲವಾರು ಕೃತಿಗಳನ್ನ ಕನ್ನಡಕ್ಕೆ ಭಾಷಂತರಿ ಸಿದ್ದೇನೆ. `ಅಂಬೇಡ್ಕರ್‌ವಾಣಿ~, `ದಲಿತ ಕೈಪಿಡಿ~, `ಭಂಗಿ ಜನಕಥೆ~, `ನರಬಲಿ~ ಮುಂತಾದ ಕೃತಿಗಳನ್ನು ಕನ್ನಡಕ್ಕೆ ತಂದಿ ದ್ದೇನೆ. ಮಾಹಿತಿ ಹಕ್ಕು ಕುರಿತು  `ಪ್ರಜೆಗೆ ಪ್ರಭುತ್ವ~ ಕೃತಿ ರಚಿಸುವುದರ ಜೊತೆಗೆ ಕೇರಳದ ಲೈಂಗಿಕ ಕಾರ್ಯಕರ್ತೆ ನಳಿನಿ ಜಮೀಲಾ ಅತ್ಮಕಥನವನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.