ADVERTISEMENT

ಪ್ರಚಾರ ಅಷ್ಟೇ, ಕುಕ್ಕರ್ ಕೊಡಲ್ಲ !

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 10:18 IST
Last Updated 26 ಏಪ್ರಿಲ್ 2013, 10:18 IST

ಚಿಕ್ಕಬಳ್ಳಾಪುರ: `ಅರ‌್ರೇ...ಗಾಡಿ ಮೇಲೆ ಪ್ರೆಷರ್ ಕುಕ್ಕರ್ ಇಟ್ಕೊಂಡು ಮಾರುತ್ತಿದ್ದೀರಾ? ಸುಬ್ಬಾರೆಡ್ಡಿಯವರ ಫೋಟೋನೂ ಇದೆ... ಅವರ ಪರವಾಗಿ ವೋಟು ಹಾಕಿದರೆ, ನಮಗೇನಾದರೂ ಕುಕ್ಕರ್ ಕೊಡ್ತೀರಾ? ಈಗಲೇ ಹೇಳಿ, ನಾವು ಹೊಸ ಪ್ರೆಷರ್ ಕುಕ್ಕರ್ ಖರೀದಿಸುವುದಾದರೂ ತಪ್ಪುತ್ತೆ'

ಬಾಗೇಪಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ವ್ಯಕ್ತಿಯೊಬ್ಬ ಎರಡು ಪ್ರೆಷರ್ ಕುಕ್ಕರ್‌ಗಳನ್ನು ತಳ್ಳುಗಾಡಿಯ ಮೇಲೆ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದರೆ, ಅತ್ತ ಮಹಿಳೆಯರು ಪದೇ ಪದೇ ಬಂದು ಪ್ರಷರ್ ಕುಕ್ಕರ್ ಕೊಡುತ್ತೀರಾ ಎಂದು ಕೇಳುತ್ತಿದ್ದರು. ಸುಡು ಸುಡು ಬಿಸಿಲಿನಲ್ಲೂ ತಲೆ ಬಿಸಿ ಮಾಡಿಕೊಳ್ಳದೇ ವ್ಯಕ್ತಿಯು `ಇದು ಎಸ್.ಎನ್.ಸುಬ್ಬಾರೆಡ್ಡಿ ಪ್ರಚಾರ ಅಷ್ಟೇ. ಕುಕ್ಕರ್ ಕೊಡಲ್ಲ' ಎಂದು ಹೇಳಿ ಮಹಿಳೆಯರನ್ನು ಸಮಾಧಾನಪಡಿಸುತ್ತಿದ್ದ.

ತಳ್ಳುಗಾಡಿಯ ಮೇಲೆ ಎರಡು ಪ್ರೆಷರ್ ಕುಕ್ಕರ್‌ಗಳನ್ನು ಇಟ್ಟುಕೊಂಡು ಪ್ರಚಾರ ಮಾಡುವುದನ್ನೇ ಕಾಯಕವಾಗಿಸಿಕೊಂಡಿರುವ ಈ ವ್ಯಕ್ತಿಯ ಹೆಸರು ಮಂಜುನಾಥ್. ಚುನಾವಣಾ ಆಯೋಗದಿಂದ ಅಭ್ಯರ್ಥಿಗಳಿಗೆ ಚಿಹ್ನೆ ಘೋಷಣೆಯಾದ ದಿನದಿಂದ ಮಂಜುನಾಥ್ ಪ್ರತಿ ದಿನ ಬಾಗೇಪಲ್ಲಿ ಬಸ್ ನಿಲ್ದಾಣದ ಎದುರಿನ ಮುಖ್ಯರಸ್ತೆಯ ಬದಿಯಲ್ಲಿ ನಿಂತು ಪ್ರಚಾರ ಕಾರ್ಯದಲ್ಲಿ ತೊಡಗುತ್ತಾರೆ.

ಹೀಗೆ ಪ್ರಚಾರ ಮಾಡಲು ಕಾರಣವೇನು ಎಂದು ಕೇಳಿದ್ರೆ ಸಾಕು, ಅವರು ಉದ್ದವಾದ ಪುರಾಣವನ್ನೇ ಬಿಚ್ಚಿಡುತ್ತಾರೆ. ಪ್ರೆಷರ್ ಕುಕ್ಕರ್ ತೆಗೆದುಕೊಳ್ಳುವ ಆಸೆಯಿಂದ ಬರುವ ಮತದಾರರು ಒಂದೆರಡು ಪ್ರಶ್ನೆ ಕೇಳುತ್ತಾರೆ.

ಮಂಜುನಾಥ್ ಪ್ರಚಾರ ಪುರಾಣ ಆರಂಭಿಸಿದ ಒಂದೆರಡು ಕ್ಷಣದಲ್ಲೇ, ಮತದಾರರು ಅದರಲ್ಲೂ ಮಹಿಳೆಯರು ಅಲ್ಲಿಂದ ಹೊರಟುಬಿಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.