ADVERTISEMENT

ಬಾಂಧವ್ಯ ವೃದ್ಧಿಗೆ ದಾಸರ ಕೀರ್ತನೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 9:49 IST
Last Updated 24 ಮಾರ್ಚ್ 2018, 9:49 IST

ಚಿಂತಾಮಣಿ: ದಾಸವರೇಣ್ಯರ ಕೀರ್ತನೆಗಳು ದೇವರನ್ನು ಸ್ತುತಿಸುವುದರ ಜತೆಗೆ ಬದುಕಿಗೆ ಅಗತ್ಯವಾದ ಪಾಠ ಕಲಿಸಿಕೊಡುತ್ತವೆ ಎಂದು ರಾಘವೇಂದ್ರಸ್ವಾಮಿ ಮಠದ ಟ್ರಸ್ಟ್‌ ಕಾರ್ಯದರ್ಶಿ ಡಿ.ಎಲ್‌.ಪ್ರಸಾದ್‌ ತಿಳಿಸಿದರು.

ನಗರದ ಜೋಡಿರಸ್ತೆಯಲ್ಲಿರುವ ರಾಘವೇಂದ್ರಸ್ವಾಮಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹರಿದಾಸ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಪರಸ್ಪರ ಬಾಂಧವ್ಯ ವೃದ್ಧಿ ಮತ್ತು ಸಾಮರಸ್ಯ ಕಾಪಾಡಿಕೊಳ್ಳಲು ದಾಸರ ಕೀರ್ತನೆಗಳು ಸಹಕಾರಿಯಾಗಿವೆ. ಪ್ರತಿನಿತ್ಯ ಭಕ್ತಿ, ಶ್ರದ್ಧೆಯಿಂದ ದಾಸರ ಪದಗಳನ್ನು ಹಾಡಿದರೆ ಆಂತರಿಕ ಶಕ್ತಿ, ಚೈತನ್ಯ, ಸ್ಥಿರತೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ದಾಸವರೇಣ್ಯರು ಸರ್ವಸ್ವವನ್ನು ತ್ಯಜಿಸಿ ಸಮಾಜದ ಸುಧಾರಣೆಗಾಗಿ ಜೀವನವನ್ನೇ ಮುಡುಪಾಗಿಟ್ಟವರು. ಸಮಾಜದಲ್ಲಿನ ಅನಿಷ್ಟ ಪದ್ಧತಿ ತೊಡೆದುಹಾಕಲು ಸರಳವಾದ ಪದಗಳ ಮೂಲಕ ಹಗಲಿರುಳು ಜನಜಾಗೃತಿ ಮೂಡಿಸಿದರು. ಇಂದಿಗೂ ಸಹ ದಾಸರಪದಗಳು ಸಮಾಜ ಸುಧಾರಣೆಗೆ ಪ್ರಸ್ತುತವಾಗಿವೆ ಎಂದರು.

ಶ್ರೀಮಾತಾ ಭಜನಾ ಮಂಡಳಿ, ಗುರುರಾಘವೇಂದ್ರ ಭಜನಾ ಮಂಡಳಿ, ಶ್ರೀವೈಷ್ಣವಿ ಭಜನಾ ಮಂಡಳಿ, ದಾಕ್ಷಾಯಿಣಿ ಭಜನಾ ಮಂಡಳಿ, ಸತ್ಯಸಂಧ ಭಜನಾ ಮಂಡಳಿಯ ಮಹಿಳೆಯರು ಪುರಂದರದಾಸರು, ಕನಕದಾಸರ ಸೇರಿದಂತೆ ಅನೇಕ ದಾಸರ ಪದಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ರಾಘವೇಂದ್ರಸ್ವಾಮಿಗಳ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಅಷ್ಟೋತ್ತರ ಸೇವೆಯನ್ನು ಸಮರ್ಪಿಸಿ ಮಹಾಮಂಗಳಾರತಿಯನ್ನು ಬೆಳಗಲಾಯಿತು. ಮಠದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.