ADVERTISEMENT

ಭ್ರಷ್ಟಾಚಾರ ನಿರ್ಮೂಲನೆ ‘ಆಮ್ ಆದ್ಮಿ’ ಉದ್ದೇಶ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 9:53 IST
Last Updated 17 ಮಾರ್ಚ್ 2014, 9:53 IST

ಗೌರಿಬಿದನೂರು: ಅಧಿಕಾರಕ್ಕಿಂತ ದೇಶ­ದಲ್ಲಿನ ಭ್ರಷ್ಟಾಚಾರ ಸಂಪೂರ್ಣ ನಿರ್ಮೂ­ಲನೆ ಮಾಡುವುದು ಆಮ್ ಆದ್ಮಿ ಪಕ್ಷದ ಉದ್ದೇಶ ಎಂದು ಕೋಲಾರ ಲೋಕಸಭಾ ಕ್ಷೇತ್ರ ಆಮ್ ಆದ್ಮಿ ಪಕ್ಷದ ನಿಯೋಜಿತ ಅಭ್ಯರ್ಥಿ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.   

ತಾಲ್ಲೂಕಿನ ವಿದುರಾಶ್ವತ್ಥದಿಂದ  ಭಾನು­ವಾರ ಆರಂಭಿಸಿದ ಚುನಾವಣಾ ಪ್ರಚಾರದ ಕಾಲ್ನಡಿಗೆ ಜಾಥಾ ಸಂದರ್ಭ ಮಾತನಾಡಿ, ಅಂದು ಸ್ವಾಂತಂತ್ರ್ಯಕ್ಕಾಗಿ ಹೋರಾಟ ನಡೆಸಲಾಯಿತು. ಅದೇ ರೀತಿ ಇಂದು ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂ­ಲನೆಗೆ ಹೋರಾಟ  ನಡೆಸ­ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ರಾಜಕೀಯ  ಎನ್ನುವುದು ತೋಳ್ಬಲ ಹಾಗೂ ಹಣಬಲ ಇರು­ವವರಿಗೆ ಮಾತ್ರ ಎಂಬುದನ್ನು ಕಾಂಗ್ರೆಸ್ ಮತ್ತು ಬಿಜೆಪಿ ಸಾಬೀತುಪಡಿಸಿವೆ ಎಂದರು.

ವಂಶಪಾರಂಪರ್ಯ ರಾಜಕಾರಣಕ್ಕೆ ಕಡಿವಾಣ ಹಾಕಿ ರಾಜಕೀಯ ಅಧಿಕಾರ ಸಾಮಾನ್ಯ ವ್ಯಕ್ತಿಗೂ ಸಿಗುವಂತಾಗ­ಬೇಕು. ಕಾಂಗ್ರೆಸ್ ಮತ್ತು ಬಿಜೆಪಿ ಆಧಿ­ಕಾರಾವಧಿಯಲ್ಲಿ ದೇಶದ ಸಂಪತ್ತು ಲೂಟಿ ಮಾಡಿ ದಿವಾಳಿಯತ್ತ ಕೊಂಡೊ­ಯ್ದಿದ್ದಾರೆ. ನರೇಂದ್ರ ಮೋದಿ ರಕ್ತಸಿಕ್ತ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿಗಳ ಜತೆ ಕೈ ಜೊಡಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಸಾಮಾನ್ಯ ಜನರ ಬದುಕು ಅತಂತ್ರ­ಗೊಳಿಸಿದ್ದಾರೆ. ವೀರಪ್ಪ ಮೊಯಿಲಿ ಪರಮ ಸುಳ್ಳುಗಾರ, ಬಿ.ಎನ್.ಬಚ್ಚೇ­ಗೌಡ ಭೂಗಳ್ಳ, ಕೆ.ಎಚ್. ಮುನಿಯಪ್ಪ ಹಣದ ರಾಜಕಾರಣ ಮಾಡಿ ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಆಮ್ ಆದ್ಮಿ ಪಕ್ಷ ಲೋಕಸಭೆ ಚುನಾ­ವಣೆಯಲ್ಲಿ ಬೇರು ಬಿಟ್ಟು, ಮುಂದಿನ ಚುನಾವಣೆ ವೇಳೆಗೆ ದಕ್ಷಿಣ ಭಾರತದಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಗುಡಿಸಿಹಾಕುತ್ತದೆ ಎಂದರು. ಪಕ್ಷದ ಕಾರ್ಯಕರ್ತರಾದ ಗಂಗಾ­ಧರಪ್ಪ, ನರಸಿಂಹಸ್ವಾಮಿ, ವೆಂಕಟೇಶ್, ಮೊಹಿತ್, ದುರ್ಗಮ್ಮ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.