ADVERTISEMENT

ಮಂಟಪ, ನಂದಿ ಮತ್ತು ಡ್ರಾಗನ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:00 IST
Last Updated 11 ಫೆಬ್ರುವರಿ 2012, 10:00 IST

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಕ್ರಾಸ್ ಬಳಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಮತ್ತು ತೋಟಗಾರಿಕೆ ಮೇಳದಲ್ಲಿ ಕೃಷಿ, ತೋಟಗಾರಿಕೆಗೆ ಸಂಬಂಧಿಸಿದಂತೆ ವಿಷಯಗಳನ್ನು ತಿಳಿಯುವುದಷ್ಟೇ ಅಲ್ಲ, ನೋಡಬಹುದಾದ ಹತ್ತು ಹಲವು ಸಂಗತಿಗಳಿವೆ. ಅವು ಅಚ್ಚರಿ ಮತ್ತು ಆಸಕ್ತಿಮಯ ಅಂಶಗಳಿಂದ ಕೂಡಿವೆ.

ಸಹಸ್ರಾರು ಗುಲಾಬಿಗಳ ನಂದಿ: ಸುಮಾರು 12 ಸಾವಿರ ಗುಲಾಬಿ ಹೂಗಳಿಂದ ಅಲಂಕರಿಸಲಾಗಿರುವ ಆರೂವರೆ ಅಡಿ ಎತ್ತರದ ನಂದಿ ಪ್ರಮುಖವಾಗಿ ಆಕರ್ಷಿಸುತ್ತದೆ. ವಿವಿಧ ಬಣ್ಣಗಳ ಗುಲಾಬಿಗಳಿಂದ ಶೃಂಗರಿಸಲಾಗಿರುವ ನಂದಿಯನ್ನು ಸಿದ್ಧಪಡಿಸಲು ತೋಟಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಇತರರು ಶ್ರಮಪಟ್ಟಿದ್ದಾರೆ.

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಬಣ್ಣಬಣ್ಣದ ಹೂಗಳಿಂದ ಬಗೆಬಗೆಯ ಆಕರ್ಷಕ ವಸ್ತುಗಳನ್ನು ಸಿದ್ಧಪಡಿಸಲಾಗುತ್ತದೆ. ನಾವು ಯಾಕೆ ಅಂಥ ಒಂದು ಪ್ರಯತ್ನ ಮಾಡಬಾರದೆಂದು ಯೋಚಿಸಿದೆವು.

ಅದರಂತೆಯೇ ನಂದಿಯನ್ನು ಸಿದ್ಧಪಡಿಸಿದೆವು. 12 ಸಾವಿರ ಗುಲಾಬಿ ಹೂಗಳಿಂದ ಕೂಡಿರುವ ನಂದಿಯು ಎಲ್ಲರನ್ನೂ ಆಕರ್ಷಿಸುತ್ತಿದೆ ಎಂದು ಮೇಳದ ಆಯೋಜಕರು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕೃಷ್ಣಪ್ಪ ಅವರು ಬಾಳೆದಿಂಡಿನ ನೆರವಿನಿಂದ ಶಿವನ ಮಂಟಪವನ್ನು ಸಿದ್ಧಪಡಿಸಿದ್ದಾರೆ. ಶಿವನ ಮಂಟಪವನ್ನು ಸಿದ್ಧಪಡಿಸಲೆಂದೇ 30 ಬಾಳೆದಿಂಡು, 15 ತೆಂಗಿನ ಸುಳಿಗೆರೆಗಳು, 400 ಗುಲಾಬಿ ಹೂಗಳು, 3 ಕೆಜಿ ಸುಗಂಧರಾಜ ಹೂಗಳು ಮುಂತಾದವು ಬಳಸಿ ಒಂದೂವರೆ ದಿನದಲ್ಲಿ ಮಂಟಪವನ್ನು ಸಿದ್ಧಪಡಿಸಿದ್ದಾರೆ. ಥಾಯ್ ಕಲೆಯ ರೂಪದಲ್ಲಿ ಜಯಂತಿ ರತನ್ ಅವರು ಬಾಳೆ ಎಲೆಗಳ ನೆರವಿನಿಂದ ವಿಶಿಷ್ಟ ಮಾದರಿ ಡ್ರಾಗನ್ ಸಿದ್ಧಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.