ADVERTISEMENT

ಮಕ್ಕಳ ಕಳ್ಳರ ವದಂತಿಗೆ ಬೆಚ್ಚಿದ ಜನ: ರಾತ್ರಿ ಕಾವಲು

​ಪ್ರಜಾವಾಣಿ ವಾರ್ತೆ
Published 21 ಮೇ 2018, 12:20 IST
Last Updated 21 ಮೇ 2018, 12:20 IST

ಚಿಕ್ಕಬಳ್ಳಾಪುರ: ‘ಮಕ್ಕಳನ್ನು ಅಪಹರಿಸುವ ಕಳ್ಳರ ತಂಡ ಬಂದಿದೆ. ಮಕ್ಕಳನ್ನು ಕದ್ದು ಹೃದಯ, ಕಿಡ್ನಿ, ಇನ್ನಿತರ ಅಂಗಾಂಗ ಕಿತ್ತುಕೊಂಡು ಹೋಗುತ್ತಾರೆ’ ಎಂಬ ಸುದ್ದಿಗಳು ವಾಟ್ಸ್‌ಆ್ಯಪ್‌, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿ ದಾಡುತ್ತಿರುವುದರಿಂದ ಪೋಷ ಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಜನರು ಜಾಗರಣೆ ನಡೆಸಿ ಕಳ್ಳರಿಗಾಗಿ ಕಾವಲು ಕಾಯುತ್ತಿದ್ದಾರೆ. ಅಪರಿಚಿತ ವ್ಯಕ್ತಿಗಳನ್ನು ಕಂಡರೆ ಗಟ್ಟಿ ಧ್ವನಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಅನುಮಾನ ಬಂದರೆ ಹಿಗ್ಗಾ ಮುಗ್ಗಾ ಥಳಿಸುವರು. ಆದರೆ ಇದಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೆಲವು ದಿನಗಳಿಂದ ಕಿಡಿಗೇಡಿಗಳು ಸಾಮಾಜಿಕ ಜಾಲತಾಣ ಬಳಸಿಕೊಂಡು ಪೋಟೋದಲ್ಲಿ ಕಾಣುವರು ನಿಮ್ಮ ಮನೆಯ ಪರಿಸರದಲ್ಲಿ ಕಂಡರೆ ಎಚ್ಚರಿಕೆ ಇರಲಿ. ಇವರು ಮಕ್ಕಳ ಕಳ್ಳರು. ಈಗಾಗಲೇ ಅನೇಕ ಮಕ್ಕಳನ್ನು ಕದ್ದು ಪರಾರಿಯಾಗಿದ್ದಾರೆ’ ಎಂಬ ಸಂದೇಶವನ್ನು ಒಳಗೊಂಡ ನಾಲ್ಕೈದು ಭಾವಚಿತ್ರಗಳ ಹರಿಬಿಟ್ಟಿ ದ್ದಾರೆ. ಇದರ ಸತ್ಯಾಸತ್ಯತೆ ತಿಳಿದು ಕೊಳ್ಳದೆ ಬೇರೆಯವರಿಗೆ ಸಂದೇಶ ಕಳುಹಿ ಸುತ್ತಿದ್ದಾರೆ. ಸುಳ್ಳು ಸುದ್ದಿಯಿಂದಾಗಿ ಜನ ನಿದ್ರೆಗೆಟ್ಟು ಹುಡುಕಾಟ ನಡೆಸುತ್ತಿದ್ದಾರೆ.

ADVERTISEMENT

ಚಿಂತಾಮಣಿ ತಾಲ್ಲೂಕಿನ ತಪತೇಶ್ವರ ಕಾಲೊನಿ, ಬಟ್ಟಹಳ್ಳಿ ಮತ್ತಿತರೆಡೆ ಜನರು ಮಕ್ಕಳ ಕಳ್ಳರನ್ನು ಹಿಡಿಯಲು ಗ್ರಾಮದಲ್ಲಿ ರಾತ್ರಿ ಕಾವಲು ಕಾಯುತ್ತಿದ್ದಾರೆ. ಮಕ್ಕಳ ಕಳ್ಳರನ್ನು ಹಿಡಿಯಲು ಎದುರು ನೋಡುತ್ತಿದ್ದಾರೆ. ಹಳ್ಳಿಗಳಿಗೆ ಬರುವ ಅಪರಿಚಿತರ ಮೇಲೆ ನಿಗಾ ಇಟ್ಟಿದ್ದಾರೆ.

ಮಕ್ಕಳ ಕಳ್ಳರ ಮಾಹಿತಿ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್‌ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಕ್ಕಳ ಕಳ್ಳರ ಮಾಹಿತಿ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ಯಾರೂ ಆತಂಕ ಪಡುವ ಅವಶ್ಯವಿಲ್ಲ. ಮೂರ್ನಾಲ್ಕು ವರ್ಷಗಳ ಹಿಂದಿನ ಪೋಟೋಗಳನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈಗಾಗಲೇ ಪ್ರಕರಣ ನಡೆದಿದೆ ಎನ್ನಲಾದ ತುಮಕೂರು, ಆಂಧ್ರಪ್ರದೇಶದಲ್ಲಿ ಮಾಹಿತಿ ಪಡೆಯಲಾಗಿದ್ದು, ಇದೊಂದು ವದಂತಿ ಎಂದು ಖಾತ್ರಿ ಪಡಿಸಿದೆ.

**
ಮಕ್ಕಳ ಅಪಹರಣ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವಂದತಿ ಸುಳ್ಳು. ಈ ಬಗ್ಗೆ ಪೋಷಕರು ಭಯ ಪಡುವ ಅಗತ್ಯವಿಲ್ಲ.ಅನುಮಾನ ಬಂದಲ್ಲಿ ಇಲಾಖೆಗೆ ದೂರು ನೀಡಿ
ಕಾರ್ತಿಕ್‌ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.