ADVERTISEMENT

ಮಹಾತ್ಮಗಾಂಧಿ ಉದ್ಯಾನ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 6:20 IST
Last Updated 5 ಫೆಬ್ರುವರಿ 2011, 6:20 IST

ಗೌರಿಬಿದನೂರು: ಪಟ್ಟಣದ ತ್ಯಾಗರಾಜ ಕಾಲೋನಿ 12ನೇ ವಾರ್ಡ್‌ನ ಮಧ್ಯಭಾಗದಲ್ಲಿರುವ ಮಹಾತ್ಮಾ ಗಾಂಧಿ ಉದ್ಯಾನ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಎಲ್ಲಿ ಬೇಕೆಂದಲ್ಲಿ ಗಿಡಗಂಟಿಗಳು ಬೆಳೆದು ಪರಿಸರವು ಮಾಲಿನ್ಯದಿಂದ ಕೂಡಿದೆ.ರಾಜ್ಯಸಭಾ ಸದಸ್ಯ ವಿಜಯಮಲ್ಯ ಕಲ್ಯಾಣ ನಿಧಿಯಿಂದ 1.75 ಲಕ್ಷ ರೂಪಾಯಿ ಅನುದಾನದಿಂದ ನಿರ್ಮಾಣಗೊಂಡ ಉದ್ಯಾನ ವರ್ಷಗಳಿಂದ ಪಾಳು ಬಿದ್ದಿದ್ದು, ಅಭಿವೃದ್ಧಿಗೆ ಯಾರೂ ಗಮನಹರಿಸುತ್ತಿಲ್ಲ.

ಉದ್ಯಾನದಲ್ಲಿ ವಿಹರಿಸಲು ಉತ್ತಮ ವಾತಾವರಣವಿತ್ತು.ವಿಶ್ರಮಿಸಲು ಸಿಮೆಂಟು ಆಸನಗಳು ಇದ್ದವು. ಉದ್ಯಾನದಲ್ಲಿ ಮಕ್ಕಳು ಆಟವಾಡಿದರೆ, ವೃದ್ಧರು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಉದ್ಯಾನವು ನಿರ್ಲಕ್ಷ್ಯಕ್ಕೆ ಒಳಗಾದ ದಿನದಿಂದ ಬಹುತೇಕ ಮಂದಿ ಇಲ್ಲಿ ಬರಲು ನಿರಾಸಕ್ತಿ ತೋರುತ್ತಿದ್ದಾರೆ. ಮಲಿನ ಪರಿಸರದಿಂದ ಅಸ್ವಸ್ಥತೆಗೆ ತುತ್ತಾಗುವ ಆತಂಕ ಎದುರಿಸುತ್ತಿದ್ದಾರೆ.

ಉದ್ಯಾನವನಕ್ಕೆ ಪ್ರತ್ಯೇಕವಾದ ಕೊಳವೆ ಬಾವಿಯಿದ್ದು, ನೆಲಮಟ್ಟದಲ್ಲಿ ಬೃಹತ್ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಈ ತೊಟ್ಟಿಯಲ್ಲಿನ ಕಲ್ಮಶ ನೀರು ಉದ್ಯಾನ ಸುತ್ತಮುತ್ತಲಿನ ಮನೆಗಳಿರುವ ನೀರಿನ ತೊಟ್ಟಿಯಲ್ಲಿ ಮಿಶ್ರಣ ಗೊಳ್ಳುತ್ತದೆ. ಇದರಿಂದಲ್ಲೂ ಅನಾರೋಗ್ಯಕ್ಕೆ ಒಳಗಾಗುವ ಭಯವಿದೆ ಎಂದು ನಿವಾಸಿಗಳು ಹೇಳುತ್ತಾರೆ.

ವಿವೇಕಾನಂದ ಶಾಲೆಯು ಉದ್ಯಾನದ ಸಮೀಪವೇ ಇದ್ದು, ಮಕ್ಕಳು ಅಲ್ಲಿ ಓಡಾಡುತ್ತಾರೆ. ಮಕ್ಕಳನ್ನು ಶಾಲೆಗೆ ಬಿಡಲು ಮತ್ತು ಮನೆಗೆ ಕರೆ ತರಲು ಬರುವ ಪೋಷಕರು ಉದ್ಯಾನದಲ್ಲಿ ಹುಳ- ಹುಪ್ಪಡಿಗಳು ಇವೆ ಎಂದು ಹೇಳುತ್ತಾರೆ. ಕೆಲ ಬಾರಿ ಹಾವನ್ನೂ ಸಹ ಕಂಡಿರುವುದಾಗಿ ಹೇಳುತ್ತಾರೆ.

ಉದ್ಯಾನವನದ ಪೂರ್ವದಲ್ಲಿ ಉತ್ತಮ ರಸ್ತೆಯಿಲ್ಲ. ಚರಂಡಿ ವ್ಯವಸ್ಥೆಯಿಲ್ಲ. ಅಲ್ಲಿ ಸಮೀಪದಲ್ಲೇ ತ್ಯಾಜ್ಯವಸ್ತುಗಳನ್ನು ಎಸೆಯ ಲಾಗುತ್ತದೆ. ಈ ಮಲಿನ ವಾತಾವರಣವನ್ನು ಶುಚಿಗೊಳಿಸುವಂತೆ ಪುರಸಭೆಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಉದ್ಯಾನದ ಅಭಿವೃದ್ಧಿಗಾಗಿ 5 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಲಾಗು ತ್ತಿದೆ. ಅನುದಾನ ಸದ್ಬಳಕೆಯಾಗಿರುವ ಬಗ್ಗೆ ಸಂಶಯ ವಿದೆ ಎಂದು ನಿವಾಸಿಗಳು ಆರೋಪಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.