ADVERTISEMENT

ವಸತಿ ಸೌಲಭ್ಯಕ್ಕಾಗಿ ನಿವಾಸಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 6:37 IST
Last Updated 22 ಮಾರ್ಚ್ 2014, 6:37 IST

ಚಿಕ್ಕಬಳ್ಳಾಪುರ: ಪುನರ್ವಸತಿ ಸೌಲಭ್ಯ, ಮೂಲಸೌಕರ್ಯ ಒದಗಿಸದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿ ನಗರದ ಕಂದವಾರ ಬಡಾವಣೆ ಶೆಡ್‌­ಗಳಲ್ಲಿ ವಾಸವಿರುವ ಬಸಪ್ಪ ಛತ್ರದ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಶೆಡ್‌ಗಳ ಮುಂಭಾಗ ಪ್ರತಿಭಟನೆ ನಡೆ­ಸಿದ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸುಮಾರು 42ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು, ನಮಗೆ ವರ್ಷಗಳಿಂದ ಭರವಸೆ ನೀಡಲಾಗುತ್ತಿದೆ ಹೊರತು ಬೇಡಿಕೆ ಮಾತ್ರ ಈಡೇರಿ­ಸುತ್ತಿಲ್ಲ ಎಂದು ಆರೋಪಿಸಿದರು.

ಬಿ.ಬಿ.ರಸ್ತೆ ಸಮೀಪದ ಬಸಪ್ಪ ಛತ್ರದ ಬಳಿ ವಾಸವಿದ್ದ ನಮ್ಮನ್ನು ಇಲ್ಲಸಲ್ಲದ ಕಾರಣ ಹೇಳಿ ಅಲ್ಲಿಂದ ಎತ್ತಂಗಡಿ ಮಾಡಿಸಲಾಯಿತು. 3 ವರ್ಷಗಳಿಂದ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಿದ್ದೇವೆ. ಯಾವುದೇ ಮೂಲಸೌಕರ್ಯ, ಉತ್ತಮ ವಸತಿ ಸೌಕರ್ಯ ಕಲ್ಪಿಸಿಲ್ಲ ಎಂದರು.

ಶೆಡ್‌ ನಿವಾಸಿ ಮಂಜು ಮಾತನಾಡಿ, ಪುನರ್ವಸತಿ ಸೌಲಭ್ಯ ಕಲ್ಪಿಸುವ ಜವಾ­ಬ್ದಾರಿ ಯಾರದ್ದು ಎಂಬುದು ನಮಗೆ ಈವರೆಗೂ ಗೊತ್ತಾಗಿಲ್ಲ. ನಗರಸಭೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾ­ಯತಿ, ಜಿಲ್ಲಾಧಿಕಾರಿ ಕಚೇರಿ ಎದು­ರಿಗೂ ಪ್ರತಿಭಟನೆ ನಡೆಸಿದೆವು. ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಸಿಗೆ ಆರಂಭವಾಗಿದ್ದು, ಶೆಡ್‌­ನಲ್ಲಿ ವಾಸವಿರಲು ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ. ಜತೆಗೆ ಹುಳು– ಹುಪ್ಪಟೆ ಕಾಟದಿಂದ ಯಾತನೆ ಅನು­ಭವಿಸುತ್ತಿದ್ದೇವೆ. ಕೆಲ ತಿಂಗಳ ಹಿಂದೆ­ಯಷ್ಟೇ ತೀವ್ರ ಚಳಿಗೆ ಎರಡು ಮಕ್ಕಳು ಸಾವನ್ನಪ್ಪಿದ್ದವು. ಈ ಬೇಸಿಗೆಗೆ ಏನಾ­ಗುತ್ತದೋ? ಅದಕ್ಕೆ ಯಾರು ಹೊಣೆ­ಗಾರರು ಆಗುತ್ತಾರೆ ಎಂದು ಅವರು ಪ್ರಶ್ನಿಸಿದರು.

ನಿವಾಸಿಗಳಾದ ಶಂಕರ್, ಮಹೇಶ್, ಜಬೀ, ಅಬ್ದುಲ್‌, ಉಲ್ಲಾಶಾಮಿ, ಮಣಿ, ಗೌಶರ್‌, ಫಾತಿಮಾ, ಪಾಷಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.