ADVERTISEMENT

ಶಾಲೆ ಅಂಗಳದಲ್ಲಿ ಅರ್ಥಪೂರ್ಣ ಕವಿ, ಕಾವ್ಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 9:35 IST
Last Updated 3 ಜನವರಿ 2012, 9:35 IST
ಶಾಲೆ ಅಂಗಳದಲ್ಲಿ ಅರ್ಥಪೂರ್ಣ ಕವಿ, ಕಾವ್ಯ
ಶಾಲೆ ಅಂಗಳದಲ್ಲಿ ಅರ್ಥಪೂರ್ಣ ಕವಿ, ಕಾವ್ಯ   

ಚಿಂತಾಮಣಿ: ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಇಲ್ಲಿನ ಸಮೀಪದ ಗಂಜಿಗುಂಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ `ಶಾಲೆ ಅಂಗಳದಲ್ಲಿ ಕವಿ-ಕಾವ್ಯ ಹಾಗೂ ಚುಟುಕು ಸಿಂಚನ  ಕಾರ್ಯ ಕ್ರಮ ನಡೆಯಿತು.

ಉತ್ಸಾಹದಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳು ಕುವೆಂಪು, ಪುತೀನ, ಪೂರ್ಣಚಂದ್ರ ತೇಜಸ್ವಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಡಿವಿಜಿ, ಮುದ್ದಣ್ಣ, ತಿನಂಶ್ರೀ, ಎ.ಎನ್.ಮೂರ್ತಿರಾವ್, ಜಿ.ಎಸ್.ಶಿವರುದ್ರಪ್ಪ ಮುಂತಾದವರ ಬದುಕು- ಬರಹ ಹಾಗೂ ಕಾವ್ಯ- ಕೃತಿಗಳ ಕುರಿತು ಅರ್ಥ ಪೂರ್ಣ ವಿಷಯ ಮಂಡಿಸುವ ಮೂಲಕ ಕನ್ನಡದ ಕವಿ ಶ್ರೇಷ್ಠರಿಗೆ ನುಡಿ ನಮನ ಸಲ್ಲಿಸಿದರು.

ಕೆಲವು ವಿದ್ಯಾರ್ಥಿಗಳು ಸ್ವ-ರಚಿತ ಚುಟುಕು ಗಳನ್ನು ವಾಚಿಸಿದರೆ, ಮತ್ತೆ ಕೆಲವರು ವಿವಿಧ ಧರ್ಮಗಳ ಶ್ಲೋಕ ಪಠಿಸುವ ಮೂಲಕ ಸರ್ವ ಧರ್ಮ ಸಮನ್ವಯ ಸಾರಿದರು.

ವೀರಸಂಗೊಳ್ಳಿರಾಯಣ್ಣನ ಪಾತ್ರದಲ್ಲಿ ಪೊಲೀಸ್ ಇಲಾಖೆಯ ಎಂ.ಸಿ.ವಿಶ್ವನಾಥ್ ಅವರು ಅಭಿನಯಿಸಿದ `ನೇಣಿಗೆ ಕೊರಳುಡ್ಡುವ ದೃಶ್ಯ~ ನೋಡುಗರನ್ನು ಭಾವುಕರನ್ನಾಗಿಸಿತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಚಾಲಕರಾದ ಎನ್.ದಾಮೋದರರೆಡ್ಡಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯನ್ನು ಅರ್ಥಪೂರ್ಣ ಸಾಹಿತ್ಯಿಕ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿರುವುದು ಹಾಗೂ ವಿಶ್ವಮಾನವ ಸಂದೇಶವನ್ನು ವಿದ್ಯಾರ್ಥಿ ಸಮೂಹಕ್ಕೆ ತಿಳಿಯಪಡಿಸುತ್ತಿರುವುದು ಸ್ವಾಗತಾರ್ಹ ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ನಾರಾಯಣರೆಡ್ಡಿ ಮಾತನಾಡಿದರು.
ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಗತಿ. ವಿ.ವೆಂಕಟರತ್ನಂ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸೀಕಲ್ ನರಸಿಂಹಪ್ಪ, ವಿ.ಎಚ್.ಬಾಲಕೃಷ್ಣ, ವಿ.ನಾರಾಯಣರೆಡ್ಡಿ ಕನ್ನಡ ಗೀತೆ ಹಾಡಿ ರಂಜಿಸಿ ದರು. ಮೈಲಾಂಡ್ಲಹಳ್ಳಿ ಅಶ್ವತ್ಥ್‌ನಾರಾಯಣ ಹಾಸ್ಯ ಚಟಾಕಿ ಮೂಲಕ ಸಭಿಕರನ್ನು ನಗೆ ಗಡಲಿ ನಲ್ಲಿ ಮುಳುಗಿಸಿದರು. ಶಾಲಾ ಮಕ್ಕಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ನಡೆದವು.

ಮುಖ್ಯ ಶಿಕ್ಷಕ ಕೆ.ಎನ್.ರಾಮಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಪುರಸ್ಕರಿಸಲಾಯಿತು. ಚುಟುಕು ಸಾಹಿತ್ಯ ಪರಿಷತ್‌ನ ಎನ್.ವಿ. ಶ್ರೀನಿವಾಸನ್, ಕೆ.ಎಸ್. ನೂರುಲ್ಲಾ ಹಾಗೂ ಚಿಂತಾಮಣಿ ಚೇತನ್ ವಿದ್ಯಾ ಸಂಸ್ಥೆಯ ಶಿವಶಂಕ ರೆಡ್ಡಿ, ಮತ್ತಿತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.