ADVERTISEMENT

ಸಂಚಾರ ನಿಯಮ ಪಾಲನೆ ಕಡ್ಡಾಯ

ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಸಿವಿಲ್‌ ನ್ಯಾಯಾಧೀಶ ರಾಜೇಂದ್ರಕುಮಾರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 6:50 IST
Last Updated 12 ಏಪ್ರಿಲ್ 2018, 6:50 IST

ಚಿಂತಾಮಣಿ: ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಮೂಲಕ ಚಾಲಕರು ತಾವು ಸುರಕ್ಷವಾಗಿದ್ದು ಇತರರ ಸುರಕ್ಷತೆಯನ್ನು ಕಾಪಾಡಬೇಕು ಎಂದು ನಗರದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್‌ ನ್ಯಾಯಾಧೀಶ ಕೆ.ಎಂ.ರಾಜೇಂದ್ರಕುಮಾರ್‌ ತಿಳಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಪೊಲೀಸ್‌ ಇಲಾಖೆ ಸಂಯುಕ್ತವಾಗಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ರಸ್ತೆ ಸುರಕ್ಷತಾ ಸಪ್ತಾಹ–2018’ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿಗೆ ಚಾಲನೆ ನೀಡಿ ಮಾತನಾಡಿದರು.

ಆಧುನಿಕ ಜೀವನಶೈಲಿಯಿಂದ ವಾಹನಗಳ ಸಂಖ್ಯೆ ದಿನ ದಿನಕ್ಕೂ ಅಧಿಕವಾಗುತ್ತಿವೆ. ರಸ್ತೆಗಳು ಮಾತ್ರ ಇದ್ದಷ್ಟೇ ಇವೆ. ಮನೆಯಿಂದ ಹೊರಗೆ ಬಂದವರು ಮತ್ತೆ ಸುರಕ್ಷಿತವಾಗಿ ಮನೆಗೆ ಸೇರಬೇಕು ಎಂದು ಅವರು ಸಲಹೆ ನೀಡಿದರು.

ADVERTISEMENT

ಮನೆಯಲ್ಲಿ ತಮ್ಮ ಕುಟುಂಬದವರು ತಮಗಾಗಿ ಕಾಯುತ್ತಿರುತ್ತಾರೆ ಎಂಬುದು ಸದಾ ಚಾಲಕರ ಮನಸ್ಸಿನಲ್ಲಿ ಇರಬೇಕು ಎಂದರು.

ಚಾಲಕರು ರಸ್ತೆ ಸುರಕ್ಷತಾ ನಿಯಮ ಪಾಲಿಸುವುದರ ಜತೆಗೆ ಇತರರನ್ನು ಸಂಚಾರ ನಿಯಮ ಪಾಲನೆಗೆ ಪ್ರೋತ್ಸಾಹಿಸಬೇಕು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಅಪಘಾತಗಳು ಕಡಿಮೆಯಾಗುತ್ತವೆ. ಸಾರ್ವಜನಿಕರು ಸುರಕ್ಷತೆಯಿಂದ ಚಾಲನೆ ಮಾಡುವುದರ ಮೂಲಕ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಹಕಾರ ನೀಡಬೇಕು ಎಂದು ನುಡಿದರು.

‌ಕುಡಿದು ವಾಹನ ಚಾಲನೆ ಮಾಡುವುದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಚಾಲನೆ ಮಾಡುವುದು, ಸಾಹಸದ ಚಾಲನೆ, ಅತಿವೇಗದ ಚಾಲನೆ ಮಾಡುವ ಪ್ರವೃತ್ತಿಯನ್ನು ಕೈಬಿಡಬೇಕು ಎಂದು ಕಿವಿಮಾತು ಹೇಳಿದರು.

ಡಿವೈಎಸ್ಪಿ ನಾಗೇಶ್‌, ವಕೀಲರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ, ಸಿಪಿಐ ರಮೇಶ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.