ಗುಡಿಬಂಡೆ: ಗ್ರಾಮೀಣ ಸೊಗಡಿನ ಅನೇಕ ಕಲಾಪ್ರಕಾರಗಳು ಇಂದು ಪೋಷಣೆ ಇಲ್ಲದೆ ಮೂಲೆಗುಂಪಾಗಿ ಕಣ್ಮರೆಯಾಗುವ ಹಂತ ತಲುಪಿದೆ. ಸಾಂಪ್ರದಾಯಿಕ ರಂಗಕಲೆ ಉಳಿಸದೆ ಹೋದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಸರ್ಕಲ್ ಇನ್ಸ್ಪೆಕ್ಟರ್ ಸಿ.ಜೆ.ರಂಗಸ್ವಾಮಿ ತಿಳಿಸಿದರು.
ಕರವೇ, ರಾಷ್ಟ್ರಪಿತ ಯುವಜನ ಸೇವಾಸಂಘ ಆಶ್ರಯದಲ್ಲಿ ಇಲ್ಲಿನ ಕೈಲಾಸಂ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಲಾವಿದ ರಂಗಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ನಾಟಕ ಕ್ಷೇತ್ರಕ್ಕೆ ಇದ್ದ ಮಾನ್ಯತೆ ಕಡಿಮೆಯಾಗಿದೆ, ಟಿವಿ ಮಾದ್ಯಮ ಬಹುವಾಗಿ ಆವರಿಸಿಬಿಟ್ಟಿದೆ ಎಂದರು. ಇದರಿಂದ ಸಂತೋಷ ಸಡಗರಗಳಿಂದ ಆಚರಿಸಬೇಕಾದ ಎಲ್ಲಾ ಹಬ್ಬಗಳ ಸಂಭ್ರಮಕ್ಕೂ ಕುಂದುಂಟಾಗಿದೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಂ.ಶ್ರೀನಿವಾಸರಾವ್, ಉಲ್ಲೋಡು ಕೆ.ಎ.ನರಸಿಂಹರೆಡ್ಡಿ, ಡಿ.ಆರ್.ನಿರಂಜನ, ದಾದಾಪೀರ್, ಜಿ.ಎಂ.ಹೊನ್ನೂರಸಾಭಿ ಅವರನ್ನು ನಾಟಕ ಮತ್ತು ರಂಗಭೂಮಿಯ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.
ಕಲಾವಿದ ಕೋಟಿಗಾನಹಳ್ಳಿ ರಾಮಯ್ಯ ವಿರಚಿತ ಹಕ್ಕಿಹಾಡು ನಾಟಕವನ್ನು ಎಂ.ರಮೇಶ್ ನಿರ್ದೇಶನದಲ್ಲಿ ಗೌರಿಬಿದನೂರು ತಾಲ್ಲೂಕಿನ ವೈಚಕೂರಹಳ್ಳಿಯ ಅಮಾಸ ತಂಡದ ಮಕ್ಕಳು ಅತ್ಯುತ್ತಮವಾಗಿ ಪ್ರಸ್ತುತ ಪಡಿಸುವ ಮೂಲಕ ಸಂಕ್ರಾಂತಿ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು. ಪ.ಪಂ. ಸದಸ್ಯ ಜಿ.ವಿ.ಆನಂದ್, ಕಲಾವಿದ ಕೆ.ಎಂ.ಯಾದವ್, ಉನ್ನತಿ ಸುರೇಶ್, ಬಿ.ಮಂಜುನಾಥ್, ವಾಹಿನಿ ಸುರೇಶ್, ಶ್ರೀನಿವಾಸಯಾದವ್ ಭಾಗವಹಿಸಿದ್ದರು. ವಕೀಲ ಜಿ.ವಿ.ವಿಶ್ವನಾಥ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.