ADVERTISEMENT

‘ಪ್ರಕೃತಿ ಮೇಲೆ ಮನುಷ್ಯ ಸವಾರಿ ನಿಲ್ಲಲಿ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 10:10 IST
Last Updated 18 ಡಿಸೆಂಬರ್ 2013, 10:10 IST

ಚಿಂತಾಮಣಿ: ಅಭಿವೃದ್ಧಿಯ ನೆಪದಲ್ಲಿ ಪ್ರಕೃತಿಯ ಮೇಲೆ ಸವಾರಿ ಮಾಡುವುದು ಸರಿಯಲ್ಲ. ಪ್ರಕೃತಿ ಮತ್ತು ಮಾನವನ ನಡುವೆ ಸಮನ್ವಯತೆ ಇರದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟದ ಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಪ್ರವಚನಕಾರ ಟಿ.ಎಲ್‌.ಆನಂದ್‌ ಹೇಳಿದರು.

ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠ­ದಲ್ಲಿ ಮಂಗಳವಾರ ಹುಣ್ಣಿಮೆಯ ಅಂಗವಾಗಿ ಹಮ್ಮಿ­ಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಕೃತಿ ಮತ್ತು ಮಾನವ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದರು.

ಅನಾದಿ ಕಾಲದಿಂದಲೂ ಮಾನವನನ್ನು ಪೋಷಿ­ಸುತ್ತಾ ಬಂದಿರುವ ದೈವಸ್ವರೂಪಿ ಪ್ರಕೃತಿಯ ಮೇಲೆ ಮಾನವನ ದಾಳಿ ಅತಿಯಾಗಿದೆ. ಪ್ರಾಚೀನ ಕಾಲದಲ್ಲಿ ಪೂರ್ವಿಕರು ಹಣ್ಣಿನ ಹಾಗೂ ನೆರಳು ಕೊಡುವ ಮರಗಳಿಗೆ ಕೊಡಲಿ ಹಾಕುತ್ತಿರಲಿಲ್ಲ. ಹಸಿವು ಮತ್ತು ಆಯಾಸವನ್ನು ತಣಿಸುವ ಪರೋಪಕಾರಿ ಮರಗಳನ್ನು ಕಡಿಯುವುದು ಮಹಾಪಾಪ ಎನ್ನುವ ಸಂಪ್ರದಾಯ ರೂಡಿಸಿಕೊಂಡಿದ್ದರು ಎಂದು ತಿಳಿಸಿದರು.

ಮನುಷ್ಯ ವೈಜ್ಞಾನಿಕವಾಗಿ ಮುಂದುವರಿದಂತೆ ಸಾವಿರಾರು ಎಕರೆ ಸಮೃದ್ಧ ಕಾಡು ನೆಲಸಮವಾಗಿವೆ. ಕಾರ್ಖಾನೆಗಳ ಹೊಲಸು ನೀರನ್ನು ನದಿಗಳಿಗೆ ಮತ್ತು ಸಮುದ್ರಗಳಿಗೆ ಹರಿಸುತ್ತಿದ್ದೇವೆ. ತಾತ್ಕಾಲಿಕ ಸುಖಕ್ಕಾಗಿ ಪ್ರಕೃತಿಯಲ್ಲಿ ಜೀವಿಸುವ ಜೀವಿಗಳ ಹಕ್ಕುಗಳನ್ನು ಕಸಿಯುತ್ತಿರುವುದು ದುರಂತ ಎಂದರು.

ಉತ್ಸವದ ಅಂಗವಾಗಿ ಬೃಂದಾವನವನ್ನು ವಿಶೇಷ­ವಾಗಿ ಅಲಂಕರಿಸಲಾಗಿತ್ತು. ಯತೀಂದ್ರರಿಗೆ ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ ನೆರವೇರಿಸಲಾಯಿತು. ನೂರಾರು ಜನರ ಸಮ್ಮುಖದಲ್ಲಿ ಉತ್ಸವ ಮೂರ್ತಿಯ ರಥೋತ್ಸವ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.