ADVERTISEMENT

ವೇದಿಕೆ ಸಿಕ್ಕಾಗ ಪ್ರತಿಭೆ ‍ಪ್ರದರ್ಶಿಸಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 13:05 IST
Last Updated 4 ಜನವರಿ 2018, 13:05 IST
ವೇದಿಕೆ ಸಿಕ್ಕಾಗ ಪ್ರತಿಭೆ ‍ಪ್ರದರ್ಶಿಸಿ
ವೇದಿಕೆ ಸಿಕ್ಕಾಗ ಪ್ರತಿಭೆ ‍ಪ್ರದರ್ಶಿಸಿ   

ಚಿಕ್ಕಬಳ್ಳಾಪುರ: ‘ಅಂತರ್ಗತವಾಗಿರುವ ಪ್ರತಿಭೆಯನ್ನು ಸೂಕ್ತ ವೇದಿಕೆ ಸಿಕ್ಕಾಗ ಅನಾವರಣಗೊಳಿಸುವ ಮೂಲಕ ಹೆಚ್ಚಿನ ಅವಕಾಶಗಳನ್ನು ಬಾಚಿಕೊಂಡು ಮುನ್ನುಗ್ಗುವ ಛಾತಿಯನ್ನು ವಿದ್ಯಾರ್ಥಿನಿಯರು ಬೆಳೆಸಿಕೊಳ್ಳಬೇಕು’ ಎಂದು ಕಿರುತೆರೆ ನಟಿ ಸಿರಿ ಹೇಳಿದರು.

ನಗರದ ಸಂತ ಜೋಸೆಫ್‌ರ ಕಾನ್ವೆಂಟ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೆಣ್ಣು ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿಯರು ಕೀಳರಿಮೆ ಬೆಳೆಸಿಕೊಂಡು ಸಣ್ಣ ಕನಸು ಕಾಣಬೇಡಿ. ನಿಮ್ಮ ಒಟ್ಟು ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳುವ ಜತೆಗೆ ನಿಮ್ಮ ಬದುಕಿಗೆ ನೀವೇ ಕೈದೀವಿಗೆಯಾಗಬೇಕು. ಜೀವನದಲ್ಲಿ ಬದ್ಧತೆ ಮತ್ತು ಶಿಸ್ತು ಬೆಳೆಸಿಕೊಂಡರೆ ಉನ್ನತ ಮಟ್ಟಕ್ಕೆ ಏರುವ ಜತೆಗೆ ಅಪಾರ ಅವಕಾಶಗಳನ್ನು ನಮ್ಮದಾಗಿಸಿಕೊಳ್ಳಬಹುದು’ ಎಂದು ತಿಳಿಸಿದರು.

ADVERTISEMENT

‘ಇವತ್ತು ಮಹಿಳೆಗೂ ಪುರುಷರಿಗೆ ಇರುವ ಎಲ್ಲಾ ಬಗೆಯ ಅವಕಾಶಗಳು ಸಹ ಇವೆ. ಹೀಗಾಗಿ ವಿದ್ಯಾರ್ಥಿನಿಯರು ತಮ್ಮಲ್ಲಿರುವ ಎಲ್ಲ ಬಗೆಯ ಸಾಮರ್ಥ್ಯಗಳನ್ನು ಬಳಸಿಕೊಂಡು ವಿಚಾರವಂತರು ಮತ್ತು ಸಶಕ್ತರಾಗಬೇಕು. ಬದಲಾವಣೆಗಾಗಿ ಕಟ್ಟುಪಾಡುಗಳನ್ನು ಮುರಿದು ಕಟ್ಟುವ ಕೆಲಸ ಮಾಡಬೇಕು. ವಿದ್ಯಾರ್ಥಿ ದೆಸೆಯಲ್ಲೇ ಭವಿಷ್ಯಕ್ಕೆ ಸುಂದರವಾದ ಕನಸು ರೂಪಿಸಿಕೊಳ್ಳುವುದು ತುಂಬಾ ಮುಖ್ಯ’ ಎಂದರು.

‘ಶಿಕ್ಷಣವಿಲ್ಲದಿದ್ದರೆ ಇಂದು ಮಹಿಳೆ ಅನೇಕ ರೀತಿ ಶೋಷಣೆಗೆ ಒಳಗಾ ಗಬೇಕಾಗುತ್ತದೆ. ಶೋಷಣೆಯಿಂದ ವಿಮೋಚನೆ ಪಡೆಯಲು ಮತ್ತು ಲಿಂಗ ಅಸಮಾನತೆಯನ್ನು ವಿರೋಧಿಸಲು ಶಿಕ್ಷಣವೇ ಮದ್ದು. ಇವತ್ತು ಬರೀ ಶಿಕ್ಷಣದಿಂದಲೇ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕೌಶಲ ತರಬೇತಿ ಪಡೆಯುವ ಅಗತ್ಯವಿದೆ. ಜತೆಗೆ ಪಠ್ಯೇತರ ಚಟುವಟಿಕೆಗಳು, ಕ್ರೀಡೆಗಳಲ್ಲಿ ಗುರುತಿಸಿಕೊಂಡರೆ ಅವು ಸಹ ಅನೇಕ ಅವಕಾಶಗಳನ್ನು ಒದಗಿಸಿಕೊಡಬಲ್ಲವು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ‘ಹೊಂಗನಸು’ ವಿದ್ಯಾರ್ಥಿ ಸಂಚಿಕೆ ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲೆ ಎಲ್ಸಮ್ಮ ಜಾಕೋಬ್‌, ಮ್ಯಾನೇಜರ್‌ ಉತ್ತಯ್ಯ ಭಾರತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.