ಬಾಗೇಪಲ್ಲಿ: ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅರ್ಹ ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತೋಟಗಾರಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘದ ಮುಖಂಡ ಗುಂಡ್ಲಪಲ್ಲಿ ಬಿ. ನಾರಾಯಣಸ್ವಾಮಿ ಮಾತನಾಡಿ, ಸರ್ಕಾರವು ನಿಂಬೆ, ನೆರಳೆ, ಸಪೋಟ, ಮಾವಿನ ಸಸಿಗಳನ್ನು ಅರ್ಹ ರೈತ ಫಲಾನುಭವಿಗಳಿಗೆ ವಿತರಿಸಲು ಯೋಜನೆ ರೂಪಿಸಿದೆ. ಆದರೆ ಅಧಿಕಾರಿಗಳು ರೈತರ ಆಯ್ಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಅನರ್ಹರಿಗೆ ಸೌಲಭ್ಯಗಳ ವಿತರಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಈರುಳ್ಳಿ ದಾಸ್ತಾನು ಮಾಡಲು ರೈತರಿಗೆ ಶೆಡ್ ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೂ ಅಧಿಕಾರಿಗಳು ರೈತರಿಗೆ ವಿತರಿಸಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಹಿತಿ ಹಕ್ಕು ಕಾಯ್ದೆಯಲ್ಲಿ ನರೇಗಾ ಮತ್ತು ಇತರ ಯೋಜನೆಗಳಲ್ಲಿ ಎಷ್ಟು ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಕೇಳಿದ ಮಾಹಿತಿಗೆ ನಾಲ್ಕು ತಿಂಗಳಾದರೂ ದಾಖಲೆ ನೀಡಲು ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದಾರೆ.
ತೋಟಗಾರಿಕೆ ಇಲಾಖೆಗಳಲ್ಲಿ ಜಿಲ್ಲೆಯಾದ್ಯಂತ ಇದೇ ರೀತಿಯ ಅವ್ಯವಹಾರಗಳು ನಡೆಯುತ್ತಿವೆ. ಅರ್ಹರಿಗೆ ನ್ಯಾಯ ಒದಗಿಸದಿದ್ದರೆ ತಾಲ್ಲೂಕು ಕೇಂದ್ರಗಳಲ್ಲಿರುವ ತೋಟಗಾರಿಕೆ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಎನ್. ಗಂಗಿರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಪ್ಪ, ಕಸಬಾ ಹೋಬಳಿ ಅಧ್ಯಕ್ಷ ಡಿ.ಎಸ್.ಜಯರಾಂ, ಗೌರವಾಧ್ಯಕ್ಷ ಆಶ್ವತ್ಥ ನಾರಾಯಣರೆಡ್ಡಿ, ಮುಖಂಡರಾದ ಪೂಲವಾರಿಪಲ್ಲಿ ಸುಧಾಕರ್, ವೆಂಕಟೇಶ್, ಶ್ರೀನಿವಾಸರೆಡ್ಡಿ, ನಾರಾಯಣರೆಡ್ಡಿ, ನರಸಪ್ಪ, ತಿಪ್ಪಣ್ಣ ರಾಮಚಂದ್ರ, ಪ್ರಕಾಶ, ನಾರಾಯಣ, ಚಂದ್ರಮೋಹನ್, ನರಸಿಂಹಪ್ಪ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.