ADVERTISEMENT

29ರಂದು ದಶಮಾನೋತ್ಸವ ಕಾರ್ಯಕ್ರಮ

ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 7:26 IST
Last Updated 26 ಜನವರಿ 2018, 7:26 IST

ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಹತ್ತು ವರ್ಷ ಪೂರೈಸಿದ್ದು, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದಿಂದ ಜ.29ಕ್ಕೆ ದಶಮಾನೋತ್ಸವ ಕಾರ್ಯಕ್ರಮವನ್ನು ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ತಹಶೀಲ್ದಾರ್ ಮಹಮ್ಮದ್ ಅಸ್ಲಾಂ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ದಶಮಾನೋತ್ಸವ ಕಾರ್ಯಕ್ರಮದ ಆಚರಣೆ ಸಲುವಾಗಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 'ಕಾರ್ಯಕ್ರಮಕ್ಕೆ 22 ಕಲಾತಂಡ,

ಒಂದು ಸಾವಿರ ತಮಟೆ ವಾದ್ಯಗಳ ತಂಡ ಭಾಗವಹಿಸಲಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ಅನೇಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು' ಎಂದು ಕೋರಿದರು.

ADVERTISEMENT

'ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮಕ್ಕೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಇಲ್ಲವಾದರೆ ಶಾಸಕರು ಯಾವ ಅಧಿಕಾರಿಗಳು ಬರಲಿಲ್ಲವೊ ಅಂತಹವರಿಗೆ ನೋಟಿಸ್ ಜಾರಿಮಾಡಿ ಎಂದು ಸೂಚಿಸುತ್ತಾರೆ ಎಂದು ತಿಳಿಸಿದರು.

ಸಭೆ ಬಳಿಕ ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ.ಶ್ರೀನಿವಾಸ್, ನಮಗೆ ಏಕೆ ಆಹ್ವಾನ ನೀಡಿಲ್ಲ, ಯಾರಿಗೆ ಮಾಹಿತಿ ನೀಡಲಾಗಿದೆ ಎಂದು ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಇದು ಭ್ರಷ್ಟಚಾರ ನಿಗ್ರಹದಳದ ಕುಂದು ಕೊರತೆಗಳ ಸಭೆ. ದಶಮಾನೋತ್ಸವದ ಪೂರ್ವಭಾವಿ ಸಭೆ ಮುಗಿದಿದೆ ಎಂದು ಹೇಳಿದರು.

ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳ ಸಿಬ್ಬಂದಿ ಹಾಗೂ ಒಬ್ಬ ಕನ್ನಡ ಪರ ಸಂಘಟನೆ, ಇನ್ನೊಂದು ದಲಿತಪರ ಸಂಘಟನೆ ಮುಖಂಡರು ಮಾತ್ರ ಹಾಜರಾಗಿದ್ದರು. ಪ್ರಚಾರದ ಕೊರತೆಯಿಂದಾಗಿ ಬಹುತೇಕ ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಭಾಗಿಯಾಗಿರಲಿಲ್ಲ.

ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್, ಬಿಸಿಎಂ ತಾಲ್ಲೂಕು ವಿಸ್ತರಣಾಧಿಕಾರಿ ಆರ್.ಶಿವಪ್ಪ, ತಾಲ್ಲೂಕು ಆಡಳಿತ ಆರೋಗ್ಯಾಧಿಕಾರಿ ಸತ್ಯನಾರಾಯಣರೆಡ್ಡಿ, ಅಬಕಾರಿ ನೀರಿಕ್ಷಕ ಕೃಷ್ಣಮೂರ್ತಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಜಿ.ಎನ್.ಪೂಜಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಕೆ.ಎಂ.ನಯಾಜ್ ಅಹಮ್ಮದ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಜಯರಾಮ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಬಸವ್ವ, ನರೇಗಾ ಎಂಜಿನೀಯರ್ ರವೀಂದ್ರ, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧಿಕಾರಿ ಗೋವಿಂದರಾಜು, ಸಾಕ್ಷರತಾ ಸಮನ್ವಯಾಧಿಕಾರಿ ಎನ್.ಶಿವಪ್ಪ, ಕರ್ನಾಟಿಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಜಿ.ಎನ್.ಅಂಜಿನಪ್ಪ, ತಾಲ್ಲೂಕು ಸಂಚಾಲಕ ಬಿ.ನರಸಿಂಹಪ್ಪ, ಸಂಘಟನಾ ಸಂಚಾಲಕ ಅಶ್ವತ್ಥಪ್ಪ, ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಭಾಗವಹಿಸಿದ್ದರು.

**

ಕಪ್ಪುಪಟ್ಟಿ ಪ್ರದರ್ಶನ

'ದಶಮಾನೋತ್ಸವ ಕಾರ್ಯಕ್ರಮ ಎಲ್ಲರ ಹಬ್ಬವೆಂದು ನಾವು ಭಾವಿಸಿಕೊಂಡಿದ್ದೇವೆ ಆದರೆ ಬಹುತೇಕ ಕನ್ನಡಪರ ಸಂಘಟನೆಗಳಿಗೆ, ದಲಿತಪರ ಸಂಘಟನೆಗಳಿಗೆ ಮಾಹಿತಿ ನೀಡಿಲ್ಲ ಎಂದು ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ.ಶ್ರೀನಿವಾಸ್ ದೂರಿದರು.

ಜಿಲ್ಲೆಯಾಗಬೇಕು ಎಂದು ಹಲವಾರು ಮುಖಂಡರು ಹೋರಾಟ ನಡೆಸಿದ್ದಾರೆ. ಅದು ಬಿಟ್ಟು ಏಕಪಕ್ಷಿಯವಾಗಿ ಈ ಸಭೆ ಆಯೋಜಿಸಲಾಗಿದೆ. ದಶಮಾನೋತ್ಸವ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ ಕಪ್ಪುಪಟ್ಟಿ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.