ಗೌರಿಬಿದನೂರು: ‘ಮುಸ್ಲಿಂ ಸಮುದಾಯವು ಧರ್ಮದ ಆಚರಣೆಗೆ ನೀಡುವಷ್ಟು ಆದ್ಯತೆಯನ್ನು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾದರೆ ಸಮುದಾಯದ ಏಳಿಗೆಸಾಧ್ಯ’ ಎಂದು ಕೆ.ಎಚ್.ಪಿ ಫೌಂಡೇಷನ್ ಅಧ್ಯಕ್ಷ ಕೆ.ಎಚ್. ಪುಟ್ಟಸ್ವಾಮಿಗೌಡ ಸಲಹೆ ನೀಡಿದರು.
ನಗರದ ಹಿರೇಬಿದನೂರು ಬಳಿಯ ಅಲ್ಪಸಂಖ್ಯಾತರ ಶಾದಿಮಹಲ್ ಕಲ್ಯಾಣ ಮಂಟಪಕ್ಕೆ ₹ 6 ಲಕ್ಷ ಮೊತ್ತದ ಅಡುಗೆ ತಯಾರಿಕಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.
ಸಮುದಾಯದ ಬಡ ಹಾಗೂ ಮಧ್ಯಮ ವರ್ಗದವರ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ನೆರವಾಗುವ ನಿಟ್ಟಿನಲ್ಲಿ ಮುಖಂಡರ ಬೇಡಿಕೆ ಮೇರೆಗೆ ಸಾಮಗ್ರಿಗಳನ್ನು ವಿತರಿಸಲಾಗಿದೆ. ದೇಶದ ಭವಿಷ್ಯ ಶಿಕ್ಷಣದ ಮೇಲೆ ನಿಂತಿದೆ. ಶಿಕ್ಷಣವೇ ನಾವು ಮಕ್ಕಳಿಗೆ ಕೊಡುವ ನಿಜವಾದ ಆಸ್ತಿ. ಆದ್ದರಿಂದ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಬಾರದು ಎಂದು ಹೇಳಿದರು.
ಸಮುದಾಯದ ಮುಖಂಡ ಕಲೀಲ್ ಮಾತನಾಡಿ, ‘ಸಮುದಾಯದ ಬಡ ಹಾಗೂ ಮಧ್ಯಮ ವರ್ಗದವರ ಮದುವೆ ಇನ್ನಿತರ ಶುಭ ಕಾರ್ಯಗಳಿಗೆ ಶಾದಿಮಹಲ್ ಅವಶ್ಯಕತೆಯಿತ್ತು. ಸರ್ಕಾರ ಶಾದಿಮಹಲ್ ನಿರ್ಮಿಸಿದರೂ ಮೂಲಸೌಲಭ್ಯ ಕಲ್ಪಿಸಿರಲಿಲ್ಲ. ಬಡವರ ಮದುವೆಗಳಿಗೆ ಅಡುಗೆ ಸಾಮಗ್ರಿಗಳಿಗಾಗಿಯೇ ಸುಮಾರು ₹ 20 ಸಾವಿರ ವೆಚ್ಚವಾಗುತ್ತಿತ್ತು. ಇದನ್ನು ಪುಟ್ಟಸ್ವಾಮಿಗೌಡ ಗಮನಕ್ಕೆ ತಂದಾಗ ತಕ್ಷಣ ಸ್ಪಂದಿಸಿ ಅಗತ್ಯವಿರುವ ವಸ್ತುಗಳನ್ನು ಒದಗಿಸಿದ್ದಾರೆ’ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಎಂ. ನರಸಿಂಹಮೂರ್ತಿ ಮಾತನಾಡಿದರು. ಮುಸ್ಲಿಂ ಮುಖಂಡರ ಬೇಡಿಕೆಯಂತೆ ಶಾದಿಮಹಲ್ ಮುಂಭಾಗ ಶೆಡ್ ನಿರ್ಮಾಣಕ್ಕೆ ಕೆ.ಎಚ್.ಪಿ ಫೌಂಡೇ ಷನ್ನಿಂದ ಭೂಮಿಪೂಜೆ ನೆರವೇರಿಸಲಾಯಿತು. ಮಸೀದಿ ಅಧ್ಯಕ್ಷ ಷಫಿ, ಪದಾಧಿಕಾರಿಗಳಾದ ಜಮೀರ್, ಫರೀದ್, ಜಬಿ, ಜಿ.ಪಂ. ಮಾಜಿ ಅಧ್ಯಕ್ಷ ಎಚ್.ವಿ. ಮಂಜುನಾಥ್, ಕೋಚಿಮುಲ್ ನಿರ್ದೇಶಕ ಜೆ. ಕಾಂತರಾಜು, ಮುಖಂಡರಾದ ಕೆ.ಎಸ್. ಅನಂತರಾಜು, ಶ್ರೀನಿವಾಸಗೌಡ, ರಾಘವೇಂದ್ರ ಹನುಮಾನ್, ಜಿ.ಕೆ. ಸತೀಶ್ ಕುಮಾರ್, ಅಬ್ದುಲ್ಲಾ, ಗಂಗಾಧರಪ್ಪ, ಸವಿತಮ್ಮ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.