ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯ 47 ಪಂಚಾಯಿತಿಗಳಿಗೆ ‘ಅಲೆಕ್ಸಾ’

ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ ಆಯ್ಕೆ; ರಾಜ್ಯದ 200 ಪಂಚಾಯಿತಿಗಳ ಅರಿವು ಕೇಂದ್ರಗಳಿಗೆ ಸಾಧನ

ಡಿ.ಎಂ.ಕುರ್ಕೆ ಪ್ರಶಾಂತ
Published 30 ಜುಲೈ 2025, 5:47 IST
Last Updated 30 ಜುಲೈ 2025, 5:47 IST
   

ಡಿ.ಎಂ.ಕುರ್ಕೆ ‍ಪ್ರಶಾಂತ್

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಹಿರಿಯ ನಾಗರಿಕರು ಮತ್ತು ಅಂಗವಿಕಲರು ತಮ್ಮ ಧ್ವನಿ ಬಳಸಿ ತಂತ್ರಜ್ಞಾನದೊಂದಿಗೆ ಸಂವಾದ ನಡೆಸಬಹುದಾದ ‘ಅಲೆಕ್ಸಾ’ ಸಹಾಯಕ ಸಾಧನವನ್ನು ಜಿಲ್ಲೆಯ 47 ಗ್ರಾಮ ಪಂಚಾಯಿತಿಗಳ ‘ಅರಿವು ಕೇಂದ್ರ’ಗಳಿಗೆ (ಗ್ರಂಥಾಲಯ) ವಿತರಿಸಲು ಸರ್ಕಾರ ಮುಂದಾಗಿದೆ.

ರಾಜ್ಯದ ಆಯ್ದ 200 ಗ್ರಾಮ ಪಂಚಾಯಿತಿಗಳ ‘ಅರಿವು ಕೇಂದ್ರ’ಗಳಿಗೆ ‘ಅಲೆಕ್ಸಾ’ ವಿತರಣೆಯ ‘ತರಂಗಿಣಿ’ ಕಾರ್ಯಕ್ರಮಕ್ಕೆ ಗ್ರಾಮೀಣಾಭಿವೃದ್ದಿ ಮತ್ತು ಐಟಿ–ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಇತ್ತೀಚೆಗೆ ಚಾಲನೆ ನೀಡಿದ್ದಾರೆ.

ADVERTISEMENT

ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯ ಆಯ್ದ 200 ಪಂಚಾಯಿತಿಗಳ ಅರಿವು ಕೇಂದ್ರಗಳಿಗೆ ‘ಅಲೆಕ್ಸಾ’ ಸಾಧನಗಳನ್ನು ವಿತರಿಸಲಾಗುತ್ತಿದೆ. ಹೀಗೆ ಮೊದಲ ಹಂತದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆಯ 47 ಪಂಚಾಯಿತಿಗಳು ‘ಅಲೆಕ್ಸಾ’ ಸೌಲಭ್ಯ ಹೊಂದಲಿವೆ.

ಬಳಕೆದಾರ ಸ್ನೇಹಿಯಾದ ‘ಅಲೆಕ್ಸಾ’ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು, ಹಿರಿಯ ನಾಗರಿಕರು, ಅಂಗವಿಕಲರು ಬಳಸಲು  ಅನುಕೂಲವಾಗಿದೆ. ತಮ್ಮ ಧ್ವನಿ ಬಳಸಿ ತಂತ್ರಜ್ಞಾನದೊಂದಿಗೆ ಸಂವಾದ ನಡೆಸಬಹುದು. ಇದು ಮಾಹಿತಿಗೆ ಸುಲಭ ಪ್ರವೇಶ ಒದಗಿಸುವ ಮೂಲಕ ಕಲಿಕೆಯನ್ನು ಸದೃಢಗೊಳಿಸುತ್ತದೆ. ಸಮಯ ಉಳಿಸುತ್ತದೆ.

‘ಅಲೆಕ್ಸಾ’ದೊಂದಿಗೆ ವಿದ್ಯಾರ್ಥಿಗಳು ತಮ್ಮ ಕ್ಯಾಲೆಂಡರ್‌ನಲ್ಲಿ ಮುಂಬರುವ ಕಾರ್ಯಕ್ರಮಗಳನ್ನು ಟ್ರ್ಯಾಕ್ ಮಾಡಬಹುದು. ಅಧ್ಯಯನ ಸಂಪನ್ಮೂಲಗಳನ್ನು ಪಡೆಯಬಹುದು. ಕಂಪ್ಯೂಟರ್ ತೆರೆಯದೆಯೇ ಇಷ್ಟೆಲ್ಲ ಮಾಡುವ ಅವಕಾಶವನ್ನು ಇದು ಕಲ್ಪಿಸಲಿದೆ. ಶಿಕ್ಷಕರು ಮುಂಬರುವ ಪಾಠಗಳಿಗೆ ತಯಾರಿ ನಡೆಸಲು ಸಹ ಅನುಕೂಲವಾಗಿದೆ.

ಸರ್ಕಾರವು ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ‘ಅರಿವು’ ಕೇಂದ್ರಗಳಾಗಿ ಮೇಲ್ದರ್ಜೇಗೇರಿಸಿದೆ. ಡಿಜಿಟಲ್‌ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ಅಂಗವಿಕಲ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮತ್ತಿತರ ಸೌಲಭ್ಯ ಒದಗಿಸಲು ಹೆಜ್ಜೆ ಇಟ್ಟಿದೆ. ಈ ಭಾಗವಾಗಿ ಈಗ ಅರಿವು ಕೇಂದ್ರಗಳಿಗೆ ‘ಅಲೆಕ್ಸಾ’ ಸೌಲಭ್ಯ ದೊರೆತಿದೆ.

ಅರಿವು ಕೇಂದ್ರಗಳನ್ನು ಅಂಗವಿಕಲ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ‘ಅಲೆಕ್ಸಾ’ ಸಾಧನ ವಿತರಿಸಲಾಗುತ್ತಿದೆ. ವಿಶೇಷವಾಗಿ ದೃಷ್ಟಿ ಸವಾಲಿರುವವರಿಗೆ ಕೇಳುವಿಕೆಯೇ ಕಲಿಕೆಯ ವಿಧಾನವಾಗಿದೆ. ಹೀಗಾಗಿ, ‘ಅಲೆಕ್ಸಾ’ ಸಾಧನವು ಗ್ರಾಮೀಣ ಅರಿವು ಕೇಂದ್ರಗಳಲ್ಲಿ ಪ್ರಸ್ತುತ ಲಭ್ಯವಿರುವ ಸೌಲಭ್ಯಗಳ ಪಟ್ಟಿಗೆ ಒಂದು ಅತ್ಯುತ್ತಮ ಸೇರ್ಪಡೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಸ್ಟೇಟ್ ಸ್ಟ್ರೀಟ್ ಕಂಪನಿಯ ಸಿಎಸ್‌ಆರ್‌ ಅನುದಾನದಲ್ಲಿ ಯುನೈಟೆಡ್‌ ವೇ ಬೆಂಗಳೂರು (ಸಂಸ್ಥೆಯ ಸಹಯೋಗದಲ್ಲಿ ‘ಅಲೆಕ್ಸಾ’ ಸಾಧನ ವಿತರಣಾ ಕಾರ್ಯಕ್ರಮ ಅನುಷ್ಠಾನವಾಗುತ್ತಿದೆ.

***

ಪಟ್ಟಿಗೆ

ಜಿಲ್ಲೆಯ ಯಾವ ಅರಿವು ಕೇಂದ್ರಗಳಿಗೆ ‘ಅಲೆಕ್ಸಾ’

ತಾಲ್ಲೂಕು;ಕೇಂದ್ರಗಳ ಸಂಖ್ಯೆ
ಗೌರಿಬಿದನೂರು;16
ಮಂಚೇನಹಳ್ಳಿ;1
ಬಾಗೇಪಲ್ಲಿ;5
ಚಿಂತಾಮಣಿ;5
ಶಿಡ್ಲಘಟ್ಟ;9
ಚಿಕ್ಕಬಳ್ಳಾಪುರ;8
ಗುಡಿಬಂಡೆ;1
ಚೇಳೂರು;2
ಒಟ್ಟು;47

ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ಯುನೈಟೆಡ್‌ ವೇ

ಬೆಂಗಳೂರು ಸಂಸ್ಥೆಯು ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ‘ಅಲೆಕ್ಸಾ’ ಸಾಧನ ಬಳಸಲು ತರಬೇತಿ ಸಹ ನೀಡುತ್ತಿದೆ. ತಾಂತ್ರಿಕ ಅಂಶ ಆಧರಿಸಿ ‘ಅಲೆಕ್ಸಾ’ ಸಾಧನ ಬಳಸುವ ಕುರಿತು ಗ್ರಂಥಾಲಯ ಮೇಲ್ವಿಚಾರಕರನ್ನು ಸಜ್ಜುಗೊಳಿಸಲು ಈ ತರಬೇತಿ ಅನುಕೂಲವಾಗಿದೆ. ವಿದ್ಯಾರ್ಥಿಗಳಿಗೆ ಸಹಾಯ ಆಗುವಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾದರಿ ಪ್ರಶ್ನೆಗಳ ಬ್ಯಾಂಕ್ ರಚನೆ ಸಮುದಾಯ ವಿದ್ಯಾರ್ಥಿಗಳು ಮತ್ತು ಯುವಜನರೊಂದಿಗೆ ತೊಡಗಿಸಿಕೊಳ್ಳುವ ವಿಧಾನಗಳು ಪರಿಣಾಮಕಾರಿಯಾಗಿ ತಂತ್ರಜ್ಞಾನದ ಮೇಲ್ವಿಚಾರಣೆ ಮತ್ತಿತರ ವಿಚಾರಗಳು ತರಬೇತಿ ಅಂಶಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.