ADVERTISEMENT

ಕೊಲೆ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 16:51 IST
Last Updated 7 ಸೆಪ್ಟೆಂಬರ್ 2020, 16:51 IST

ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಬಳಿ ಕೊಲೆ ಸೂಲಿಬೆಲೆ ರಸ್ತೆಯಲ್ಲಿ ಆ.27 ರಂದು ವ್ಯಾಪಾರಿಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿ ಹೊಸಕೋಟೆಯ ನವೀನ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

ನಿರಂಜನಮೂರ್ತಿ(52) ಕೊಲೆಯಾದ ವ್ಯಕ್ತಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಐಬಸಾಪುರದ ನಿವಾಸಿಯಾಗಿದ್ದ ಅವರು, ಜಂಗಮಕೋಟೆ ಕ್ರಾಸ್‌ನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ದಿನಸಿ ಅಂಗಡಿಯ ಜತೆಗೆ ವಾಹನಗಳನ್ನು ಕೊಂಡು ಮಾರುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.

‘ಕಳೆದ ಆರು ತಿಂಗಳಿನಿಂದ ನವೀನ್ ಎಂಬ ವ್ಯಕ್ತಿ ಹಣಕಾಸಿನ ಮತ್ತು ವಾಹನ ವಿಚಾರದಲ್ಲಿ ನಿರಂಜನಮೂರ್ತಿ ಅವರೊಂದಿಗೆ ವ್ಯವಹಾರ ನಡೆಸುತ್ತಿದ್ದರು. ಮಾರುತಿ ಓಮ್ನಿ ವಾಹನವನ್ನು ನವೀನ್ ಕಳೆದ ಹತ್ತು ದಿನಗಳ ಹಿಂದೆ ನಿರಂಜನಮೂರ್ತಿ ಅವರಿಗೆ ₹2 ಲಕ್ಷ 85 ಸಾವಿರಕ್ಕೆ ಮಾರಾಟ ಮಾಡಿದ್ದರು. ನಿರಂಜನಮೂರ್ತಿ ನಾನು ₹2 ಲಕ್ಷ ಮಾತ್ರ ಕೊಡುತ್ತೇನೆ ಎಂದಿದ್ದಾರೆ’.

ADVERTISEMENT

ಈ ವಿಚಾರವಾಗಿ ಮಾತುಕತೆ ನಡೆಸಲು ಕರೆದೊಯ್ದ ನವೀನ್, ಚಾಕುವಿನಿಂದ ಕುತ್ತಿಗೆ ಹಾಗೂ ಎದೆಗೆ ತಿವಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ್ದ ಸ್ಥಳದ ಸ್ವಲ್ಪ ದೂರದಲ್ಲಿ ಮೃತ ದೇಹವನ್ನು ಬಿಸಾಡಿ, ಅಲ್ಲಿಂದ ಎಚ್.ಕ್ರಾಸ್ ಮೂಲಕ ಮೈಸೂರಿಗೆ ಹೋಗಿದ್ದಾನೆ. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಸುರೇಶ್, ಗ್ರಾಮಾಂತರ ಠಾಣೆ ಎಸ್.ಐ ಲಿಯಾಖತ್, ನಗರ ಠಾಣೆ ಎಸ್.ಐ ಸಂಗಮೇಶ್ ಮೇಠಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.