
ಬಾಗೇಪಲ್ಲಿ: ಜಿಲ್ಲೆಗೆ ಕೃಷ್ಣಾ ನದಿ ನೀರು ಹಂಚಿಕೆ, ರೈತರಿಗೆ ಹಕ್ಕುಪತ್ರ ವಿತರಣೆ, ಮನರೇಗಾ ಕಾಯ್ದೆ ಮರುಜಾರಿ, ರೈತ-ಕೃಷಿಕೂಲಿಕಾರರ ರಕ್ಷಣೆಗಾಗಿ ಮುಂದಿನ ಹೋರಾಟ ರೂಪಿಸಲು ಕರ್ನಾಟಕ ಪ್ರಾಂತ ರೈತ ಸಂಘಟನೆಯಿಂದ ಫೆಬ್ರುವರಿ 25, 26 ರಂದು ಬಾಗೇಪಲ್ಲಿ ಪಟ್ಟಣದಲ್ಲಿ 19ನೇ ಚಿಕ್ಕಬಳ್ಳಾಪುರ ಜಿಲ್ಲಾ ರೈತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಅಧ್ಯಕ್ಷ ದೇವಿಕುಂಟೆ ಶ್ರೀನಿವಾಸ್ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಧಿಕವಾಗಿ ಟೊಮೆಟೊ, ಹೂವು, ತರಕಾರಿ ಬೆಳೆಯಲಾಗುತ್ತಿದೆ. ರೈತರ ಭೂಮಿಗಳನ್ನು ಸರ್ಕಾರ ಸ್ವಾಧೀನಪಡಿಸಿ ಕೈಗಾರಿಕೆ ಮಾಡಲು ಹೊರಟಿವೆ. ಉತ್ಪಾದನಾ ಕೈಗಾರಿಕೆ ಆರಂಭಿಸಿದರೆ ರೈತರಿಗೆ ಅನುಕೂಲ ಆಗಲಿದೆ. ದೇಶದ ಬಡವರು, ಬಡವರಾಗಿಯೇ ಇದ್ದಾರೆ. ಶ್ರೀಮಂತರ ಮತ್ತು ಕಾರ್ಪೋರೇಟ್ ಕಂಪನಿಗಳ ಆಸ್ತಿ ಹೆಚ್ಚಾಗುತ್ತಿವೆ. ಕೃಷಿಗೆ, ಕೈಗಾರಿಕೆಗೆ ಶಾಶ್ವತ ನೀರಾವರಿ ಯೋಜನೆ ಇರಬೇಕು. ನೀರಾವರಿ ಯೋಜನೆ ಜಾರಿ ಮಾಡದ ಸರ್ಕಾರ, ಬೆಂಗಳೂರಿನ ಕೊಳಚೆ ನೀರು ಕೆರೆಗಳಿಗೆ ತುಂಬಿಸಿದೆ. ಇದರಿಂದ ರೈತರಿಗೆ ಯಾವುದೇ ಅನುಕೂಲಗಳು ಇಲ್ಲ ಎಂದರು.
ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳ, ಪುರಸಭಾ ಸದಸ್ಯರು ಅನೇಕ ತಿಂಗಳಿಂದ ಇಲ್ಲ. ಇದೀಗ ಶಾಸಕ ಅನರ್ಹರಾಗಿದ್ದಾರೆ. ಕ್ಷೇತ್ರದ ಎಲ್ಲ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಮಿತಿಮೀರಿದೆ. ತಾಲ್ಲೂಕು ಆಡಳಿತದ ಕಚೇರಿಯಲ್ಲಿ ದಲ್ಲಾಳಿಗಳ ಕಾಟ ಹೆಚ್ಚಾಗಿದೆ. ತಹಶೀಲ್ದಾರ್ಗೆ ಸಿಬ್ಬಂದಿ ಮೇಲೆ ಹಿಡಿತ ಇಲ್ಲ. ಜನರು ಪಡಿತರ ಚೀಟಿ, ಆಧಾರ್, ಪಹಣಿ ಸೇರಿದಂತೆ ಅಗತ್ಯ ದಾಖಲೆ ಪಡೆಯಲು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ ಎಂದರು.
ಅಧಿಕಾರಿಗಳು ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ಬಡ ಜನರಿಗೆ ಮೋಸ ಮಾಡುತ್ತಿದ್ದಾರೆ. ಕೃಷಿಕೂಲಿಕಾರರ ಸಮಸ್ಯೆಗಳ ಪರ, ಜನರ ವಿರೋಧಿ ನೀತಿಗಳ ವಿರುದ್ಧ 2 ದಿನ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಮುಂದಿನ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಡಿ.ಟಿ.ಮುನಿಸ್ವಾಮಿ ಮಾತನಾಡಿ, ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ವರ್ಷ ಕಳೆದರೂ, ಆಡಳಿತ ಮಂಡಳಿ ರಚನೆ ಆಗಿಲ್ಲ. ಅಧ್ಯಕ್ಷರ ರಾಜಕೀಯ ಪೈಪೋಟಿಗೆ ಬಡ ರೈತರು, ಮಹಿಳೆಯರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದರು.
ಸಂಘಟನೆಯ ಜಿಲ್ಲಾ ಸಂಚಾಲಕ ಚನ್ನರಾಯಪ್ಪ ಮಾತನಾಡಿ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 6 ದಶಕಗಳಿಂದಲೂ ಜೋಡಿ ಇನಾಂತಿ ರದ್ದತಿಗಾಗಿ, ಉಳುವವನಿಗೆ ಭೂಮಿ ಸಿಗಬೇಕು. ಕೃಷಿಕೂಲಿಕಾರ್ಮಿಕರಿಗೆ ಸರ್ಕಾರಿ ಬಂಜರುಭೂಮಿ, ಗೋಮಾಳ, ಅರಣ್ಯಭೂಮಿ ಮಂಜೂರು ಮಾಡಬೇಕು. ಇದೀಗ ಜಿಲ್ಲೆಯಲ್ಲಿ ಸಾವಿರಾರು ರೈತರು ಬಗರ್ ಹುಕುಂ ಸಕ್ರಮಕ್ಕೆ ಅರ್ಜಿ ಸಲ್ಲಿಸಿದರೂ ರೈತರಿಗೆ ಭೂಮಿ ಮಂಜೂರಾತಿ ಆಗಿಲ್ಲ. ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಫೆ. 25ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಗೂಳೂರು ವೃತ್ತದಲ್ಲಿ ಬೃಹತ್ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಗೆ ಜಿಲ್ಲೆಯ 3 ಸಾವಿರ ಕೃಷಿಕೂಲಿಕಾರ್ಮಿಕರು, ಸಾರ್ವಜನಿಕರು ಭಾಗವಹಿಸಲಿದ್ದಾರೆ. 26ರ ಗುರುವಾರ ಜಿಲ್ಲಾ ರೈತರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಾಂತ ರೈತ ಸಂಘದ ಮುಖಂಡ ಎಂ.ಎನ್.ರಘುರಾಮರೆಡ್ಡಿ, ಜಿ.ಕೃಷ್ಣಪ್ಪ, ಅಶ್ವತ್ಥಪ್ಪ, ನರಸಿಂಹರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.