
ಬಾಗೇಪಲ್ಲಿ: ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ ತಾಲ್ಲೂಕು ವಕ್ಕಲಿಗರ ಸಂಘದ ವತಿಯಿಂದ ಭಾನುವಾರ ವೇಮನ ಜಯಂತಿ ಕಾರ್ಯಕ್ರಮ ನಡೆಯಿತು.
ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಿಂದ ಡಾ.ಎಚ್.ಎನ್.ವೃತ್ತದ ಡಿವಿಜಿ ಮುಖ್ಯರಸ್ತೆಯಲ್ಲಿಯಲ್ಲಿ ವೇಮನ ಮೂರ್ತಿಯನ್ನು ಭುಜದ ಮೇಲೆ ಹೊತ್ತು ಮೆರವಣಿಗೆ ನಡೆಸಿದರು. ಮೆರವಣಿಗೆಗೆ ತಮಟೆ, ನಾದಸ್ವರ ಹಾಗೂ ಡೋಲು ಕಲಾವಿದರು ಮೆರಗು ಹೆಚ್ಚಿಸಿದರು.
ಈ ವೇಳೆ ಹರಿಹರ ತಾಲ್ಲೂಕಿನ ಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಮಾತನಾಡಿ, ವೇಮನ ಅವರು ಕವಿ, ತತ್ವಜ್ಞಾನಿ, ಆದರ್ಶ ವ್ಯಕ್ತಿ. ಅಂತರಂಗದ ಶುದ್ಧಿಗೆ ಮಹನೀಯರ ಆದರ್ಶಗಳನ್ನು ಪಾಲಿಸಬೇಕು. ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಮಹನೀಯರು ವೇಮನರು. ಇವರ ನೆನಪಿನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವೇಮನ ಅಧ್ಯಯನ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಪರಗೋಡು ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸುಧಾಕರ್ ಮಾತನಾಡಿ, ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ವೇಮನರು ಮಾಡಿದ್ದಾರೆ. ಸಮಾಜದಲ್ಲಿನ ಅನಿಷ್ಠ ಪದ್ಧತಿ, ಸಾಮಾಜಿಕ ಪಿಡುಗು, ಮೂಢನಂಬಿಕೆ, ಮೇಲು–ಕೀಳು, ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆ ತಮ್ಮ ತತ್ವ ಪದಗಳ ಮೂಲಕ ಜನಜಾಗೃತಿ ಮೂಡಿಸಿದರು.
ನ್ಯಾಷನಲ್ ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥ ವಿ.ವೆಂಕಟಶಿವಾರೆಡ್ಡಿ, ಒಕ್ಕಲಿಗ ಜನಾಂಗದ ಅದ್ಯಕ್ಷ ನರಸಿಂಹರೆಡ್ಡಿ, ಸೋಮಶೇಖರ ರೆಡ್ಡಿ, ಪ್ರೀತಮ್ ರೆಡ್ಡಿ, ಆರ್.ಹನುಮಂತರೆಡ್ಡಿ, ಡಿ.ಎನ್.ಕೃಷ್ಣಾರೆಡ್ಡಿ, ವೈ.ಶ್ರೀನಿವಾಸರೆಡ್ಡಿ, ಪಿ.ಮಂಜುನಾಥರೆಡ್ಡಿ, ಶಿವರಾಮರೆಡ್ಡಿ, ವೆಂಕಟರಂಗಾರೆಡ್ಡಿ, ಪ್ರಭಾಕರರೆಡ್ಡಿ, ಬೆಂಗಳೂರು ಪ್ರಭಾಕರ್ ರೆಡ್ಡಿ, ಪ್ರತಾಪ್ ರೆಡ್ಡಿ, ಅಶ್ವತ್ಥರೆಡ್ಡಿ, ಗಂಗಾಧರ ರೆಡ್ಡಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.