ಚಿಕ್ಕಬಳ್ಳಾಪುರ: ಬಿಜೆಪಿಯವರು ಹಿಂದೂಗಳಿಗೆ ಏನು ಮಾಡಿದ್ದಾರೆ? ಇವರಿಂದ ಹಿಂದೂಗಳು ಹಾಳಾಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಟೀಕಾಪ್ರಹಾರ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತದಲ್ಲಿ ದೇಶದಲ್ಲಿ 7 ಲಕ್ಷಕ್ಕೂ ಹೆಚ್ಚು ದೇಗುಲಗಳನ್ನು ನಿರ್ಮಿಸಿದೆ. ಶಕ್ತಿ ಪೀಠಗಳು ಆಗಿದ್ದು ನಮ್ಮ ಅವಧಿಯಲ್ಲಿ. ಆದರೆ ಇವರು ಎಷ್ಟು ದೇವಾಲಯ ಕಟ್ಟಿಸಿದ್ದಾರೆ ಎಂದು ಪ್ರಶ್ನಿಸಿದರು.
ಮೂರ್ತಿ ಕೆತ್ತಿದ್ದು, ದೇಗುಲ ಕಟ್ಟಿದ್ದು ಈ ದೇಶದ ತಳ ಸಮುದಾಯಗಳು. ಆದರೆ ಈ ಸಮುದಾಯಗಳಿಗೆ ಪೂಜೆ ಮಾಡಲು ಅವಕಾಶವೇ ಇಲ್ಲ. ಪೂಜೆಯ ಅವಕಾಶಗಳನ್ನು ಸಣ್ಣ ಸಮುದಾಯಗಳಿಗೆ ಕೊಡಲಿಸಲು ಬಿಜೆಪಿ ನಾಯಕರು ಹೋರಾಟ ನಡೆಸಲಿ ಎಂದು ಆಗ್ರಹಿಸಿದರು.
ಮಧ್ಯಪ್ರಾಚ್ಯದ ಮುಸ್ಲಿಂ ದೇಶಗಳಲ್ಲಿ ನಮ್ಮ ದೇಶದ 50 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ರಾಷ್ಟ್ರಗಳಿಂದ ದೇಶಕ್ಕೆ ಶೇ 50ರಷ್ಟು ಪೆಟ್ರೋಲಿಯಂ ಉತ್ಪನ್ನಗಳು ಪೂರೈಕೆ ಆಗುತ್ತಿವೆ. ಈ ಬಗ್ಗೆ ಮಾತನಾಡುವುದಿಲ್ಲ ಎಂದರು.
ಮುಸ್ಲಿಮರು, ಪಾಕಿಸ್ತಾನ, ಹಿಂದುತ್ವ ಬಿಟ್ಟರೆ ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಚಾರಗಳೇ ಇಲ್ಲ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.