
ಬಾಗೇಪಲ್ಲಿ: ಬಾಗೇಪಲ್ಲಿ ನಗರದಲ್ಲಿ ‘ಬ್ಲೂಮ್ಸ್ ಉತ್ಸವ’ವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.
ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಮಾನಸಿಕ ತಜ್ಞ ಹಾಗೂ ಪದ್ಮಶ್ಮೀ ಪುರಸ್ಕೃತ ಡಾ.ಸಿ.ಆರ್. ಚಂದ್ರಶೇಖರ್ ಮಾತನಾಡಿ, ‘ಇಂದಿನ ಯುವಜನರಲ್ಲಿ ರಕ್ತಹೀನತೆ, ನಿಶಕ್ತಿ ಸೇರಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದೆ’ ಎಂದು ಹೇಳಿದರು.
ಇಂದಿನ ಯುವ ಸಮುದಾಯವು ಮನೆಯಲ್ಲಿ ತಯಾರಿಸುವ ತಿಂಡಿಗಳನ್ನು ಸೇವಿಸುತ್ತಿಲ್ಲ. ಹೊರಗಿನ ತಿಂಡಿಗಳು ಸೇವಿಸುವವರೇ ಹೆಚ್ಚಾಗಿದ್ದಾರೆ. ಇದರಿಂದ ಬಹುತೇಕ ಯುವ ಜನರಲ್ಲಿ ಹೃದಯಾಘಾತ ಸಂಭವಿಸುತ್ತಿದೆ. ಹಿಂದಿನ ಕಾಲದಲ್ಲಿ ಮೊಳಕೆಕಾಳು, ಮುದ್ದೆ, ಸೊಪ್ಪು, ತರಕಾರಿ, ಗಡ್ಡೆಗೆಣಸು ಸೇವಿಸುತ್ತಿದ್ದರು. ಹಾಗಾಗಿ ಅವರು ದೀರ್ಘ ಕಾಲ ಬದುಕುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಜಂಕ್ ಆಹಾರ ಪದಾರ್ಥಗಳ ಸೇವನೆಯಿಂದ ಅನೇಕ ರೋಗಗಳು ಹರಡುತ್ತಿವೆ ಎಂದರು.
ಹಿರಿಯ ವಕೀಲ ಎ.ಜಿ.ಸುಧಾಕರ್ ಮಾತನಾಡಿ, ಹೆಚ್ಚಿನ ಯುವ ಜನರು ಕಾನೂನುಬಾಹಿರ ಪ್ರಕರಣಗಳಲ್ಲಿ ಪಾಲ್ಗೊಂಡು ಜೈಲು ಪಾಲಾಗುತ್ತಿದ್ದಾರೆ. ಪೋಷಕರ ಕನಸು ನನಸು ಮಾಡಲು ವಿದ್ಯಾರ್ಥಿಗಳು ಉತ್ತಮವಾಗಿ ಓದಬೇಕು. ದುಶ್ಚಟಗಳಿಗೆ ಬಲಿಯಾಗಬಾರದು. ಕೆಲವರು ಗಾಂಜಾ, ಆಫೀಮು, ಸೇರಿದಂತೆ ದುಶ್ಚಟಗಳಿಗಾಗಿ ವಿದ್ಯಾರ್ಥಿಗಳನ್ನು ಗುರಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಮರ್ಶಕ ರಂಜಾನ್ ದರ್ಗಾ, ಬ್ಲೂಮ್ಸ್ ಅಕಾಡೆಮಿ ಸಂಸ್ಥಾಪಕ ಡಾ.ವಿ.ಗೋವಿಂದರಾಜು, ಕಾರ್ಯದರ್ಶಿ ಜಿ.ಅಶ್ವಿನಿ, ಪ್ರಾಂಶುಪಾಲರಾದ ಉಮಾಶಶಿ, ಡಾ.ವೈ.ಎಚ್.ಮಂಜುಳ, ಇ.ವಿ.ಅರ್ಚನ, ಉಪಪ್ರಾಂಶುಪಾಲ ಎಂ.ಗೋವಿಂದರಾಜು, ಎ.ಚಂದ್ರ ಹಾಗೂ ಉಪನ್ಯಾಸಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.