ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು ಶನಿವಾರ ಚುನಾವಣಾಧಿಕಾರಿ ಅವರಿಗೆ ಎರಡು ಸೆಟ್ ನಾಮಪತ್ರಗಳನ್ನು ಸಲ್ಲಿಸಿದರು.
ಮಾಜಿ ಶಾಸಕ ಶಿವಾನಂದ ಮತ್ತು ನಗರಸಭೆ ಮಾಜಿ ಸದಸ್ಯೆ ಲೀಲಾವತಿ ಶ್ರೀನಿವಾಸ್ ಅವರು ಸುಧಾಕರ್ ಅವರ ಜತೆಗೆ ತಾಲ್ಲೂಕು ಕಚೇರಿಗೆ ಬಂದ ಸುಧಾಕರ್ ಅವರು ಸರಳವಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರೈಸಿದರು.
ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಅವರು ಕೂಡ ಶನಿವಾರ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಸೋಮವಾರ (ನ.18) ಸುಧಾಕರ್ ಅವರು ಬೃಹತ್ ಮೆರವಣಿಗೆಯೊಂದಿಗೆ ತಮ್ಮ ಶಕ್ತಿಪ್ರದರ್ಶನ ಮಾಡುವ ಮೂಲಕ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಲ್ಲಿದ್ದಾರೆ.
ಈ ಹಿಂದೆ ಸೆಪ್ಟೆಂಬರ್ 21ರಂದು ಉಪ ಚುನಾವಣೆ ಅಧಿಸೂಚನೆ ಪ್ರಕಟವಾಗಿದ್ದ ವೇಳೆ ಸೆ.23 ರಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆ ನಾಮಪತ್ರವನ್ನು ಕೂಡ ಈ ಚುನಾವಣೆಗೆ ಪರಿಗಣಿಸಲಾಗುತ್ತದೆ.
ನ.11ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ಆರು ದಿನಗಳಲ್ಲಿ ಈ ಹಿಂದೆ ಕೇಶವರೆಡ್ಡಿ ಅವರು ಸಲ್ಲಿಸಿದ ನಾಮಪತ್ರವೂ ಸೇರಿದಂತೆ ಐದು ನಾಮಪತ್ರಗಳು ಸಲ್ಲಿಕೆಯಾಗಿವೆ. ನ.18 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನ.19 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನ.21 ಕೊನೆಯ ದಿನವಾಗಿದೆ. ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ಡಿ.9 ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.