ADVERTISEMENT

ಗೌರಿಬಿದನೂರು: ಆಶಯಕ್ಕೆ ತಕ್ಕಂತೆ ಬಾಳಲು ಕರೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 1:46 IST
Last Updated 27 ಜನವರಿ 2021, 1:46 IST
ಗೌರಿಬಿದನೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು
ಗೌರಿಬಿದನೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು   

ಗೌರಿಬಿದನೂರು: ‘ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಷ್ಟ್ರದ ಜನತೆ ಏಕತೆ ಮತ್ತು ಸಮಾನತೆಯಿಂದ ಬದುಕುವ ಅವಕಾಶ ದೊರೆಯುವವರೆಗೂ ಹೋರಾಟದ ಹಾದಿಯನ್ನು ಮರೆಯುವಂತಿಲ್ಲ. ಇದಕ್ಕಾಗಿ ಸಂವಿಧಾನದ ಅಡಿಯಲ್ಲಿ ಎಲ್ಲ ಅಂಗಗಳು ಕಾರ್ಯನಿರ್ವಹಿಸಬೇಕು’ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.

ನಗರದ ನೇತಾಜಿ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ 72ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸಂವಿಧಾನದ ಆಶಯಗಳಿಗೆ ಪೂರಕವಾಗಿ ಜನತೆ ಬದುಕುವ ಪರಿಯನ್ನು ರೂಢಿಸಿಕೊಳ್ಳಬೇಕಾಗಿದೆ. ಕೇಂದ್ರ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಜಾರಿಗೆ ತರಲು ಮುಂದಾಗಿರುವ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳು ಈ ದೇಶಕ್ಕೆ ಮಾರಕವಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನತೆಯ ನೆಮ್ಮದಿಗೆ ಮಾರಕವಾಗಿದೆ. ಸ್ವಾತಂತ್ರ್ಯದ ನಂತರ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನದ ರೂಪುರೇಷೆಗಳಿಗೆ ಪೂರಕವಾಗಿ ಸರ್ಕಾರ ನಡೆದುಕೊಳ್ಳುತ್ತಿಲ್ಲ. ಸಂವಿಧಾನದ ಕಗ್ಗೊಲೆ ನಿರಂತರವಾಗಿ ನಡೆಯುತ್ತಿದ್ದರೂ ಕೂಡ ಸರ್ಕಾರ ನಿಯಂತ್ರಣ ಮಾಡಲು ವಿಫಲವಾಗಿದೆ’ ಎಂದು ಹೇಳಿದರು.

ADVERTISEMENT

ತಹಸೀಲ್ದಾರ್ ಎಂ.ರಾಜಣ್ಣ ಮಾತನಾಡಿ, ‘ಪ್ರತಿಯೊಂದು ಸರ್ಕಾರಗಳು ಹಾಗೂ ಆಡಳಿತವು ಸಂವಿಧಾನದ ಅಡಿಯಲ್ಲಿನ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಮಾಜದಲ್ಲಿನ ಎಲ್ಲರೂ ಇದಕ್ಕೆ ಬದ್ಧರಾಗಿ ಬದುಕಬೇಕಾಗಿದೆ‌. ರಾಷ್ಟ್ರದ ಅಭಿವೃದ್ಧಿಗಾಗಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿಕೊಟ್ಟಿರುವ ಸಂವಿಧಾನದ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಪ್ರತಿಯೊಬ್ಬ ‌ನಾಗರೀಕರೂ ಅರಿತು ‌ಬಾಳಬೇಕಾಗಿದೆ’ ಎ‌ಂದರು.

ಕೋವಿಡ್ ವಾರಿಯರ್‌ಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಕೆ.ಎಂ.ಗಾಯತ್ರಿ ಬಸವರಾಜ್, ಉಪಾಧ್ಯಕ್ಷೆ ಭಾಗ್ಯಮ್ಮ, ಪೌರಾಯುಕ್ತ ಜಿ.ಎನ್.ಚಲಪತಿ, ತಾ.ಪಂ ಇಒ ಎನ್‌.ಮುನಿರಾಜು, ತಾ.ಪಂ ಅಧ್ಯಕ್ಷ ಆರ್.ಲೋಕೇಶ್, ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ, ಸಿಪಿಐ ಶಶಿಧರ್, ಅಧಿಕಾರಿಗಳಾದ ಡಾ.ಶ್ರೀನಿವಾಸ್, ರವಿ, ಮಂಜುನಾಥ್, ಆದಿನಾರಾಯಣಪ್ಪ, ಮಂಜುನಾಥ್, ಹನುಮಂತರೆಡ್ಡಿ, ಮುಖಂಡರಾದ ಎಚ್‌.ಎನ್.ಪ್ರಕಾಶ್ ರೆಡ್ಡಿ, ಹನುಮಂತರೆಡ್ಡಿ, ವಿ.ಅಮರನಾಥ್, ಕೆ.ಪ್ರಭಾನಾರಾಯಣಗೌಡ, ಜಿ.ಎನ್.ರಾಮಪ್ಪ, ಡಿ.ಎ‌.ಮಂಜುಳಾ, ರಮೇಶ್, ಶ್ರೀನಿವಾಸ್, ಕೆ.ಆರ್.ಸಪ್ತಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.