ಚಿಕ್ಕಬಳ್ಳಾಪುರ: ತಾಲ್ಲೂಕಿನ ಶ್ರೀರಾಮಪುರ ಗ್ರಾಮದಲ್ಲಿ ಇತ್ತೀಚೆಗೆ ಬೀದಿ ನಾಯಿಗಳಿಗೆ ಹೆದರಿ ಓಡುವ ಭರದಲ್ಲಿ ಕೃಷಿಹೊಂಡಕ್ಕೆ ಬಿದ್ದ ಜಿಂಕೆಯನ್ನು ಗ್ರಾಮಸ್ಥರು ರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.
ಕುಡಿಯುವ ನೀರು ಅರಸಿ ಗ್ರಾಮಕ್ಕೆ ಬಂದಿದ್ದ ಜಿಂಕೆಯನ್ನು ನೋಡಿದ್ದೇ ನಾಯಿಗಳು ಬೆನ್ನಟ್ಟಿದ್ದವು. ಇದರಿಂದ ಬೆದರಿದ ಜಿಂಕೆ ನಾಯಿಗಳಿಂದ ತಪ್ಪಿಸಿಕೊಂಡು ಓಡುವಾಗ ಜಮೀನೊಂದರ ಕೃಷಿ ಹೊಂಡಕ್ಕೆ ಬಿದ್ದು, ಮೇಲೆ ಬರಲಾರದೆ ನೀರಿನಲ್ಲಿಯೇ ವಿಲವಿಲನೆ ಒದ್ದಾಡುತ್ತಿತ್ತು.
ಈ ವಿಷಯ ತಿಳಿಯುತ್ತಿದ್ದಂತೆ ನಿವೃತ್ತ ಶಿಕ್ಷಕ ಹನುಮಂತಪ್ಪ, ‘ಪ್ರಜಾವಾಣಿ’ ಛಾಯಾಗ್ರಾಹಕ ಬಿ.ಆರ್.ಮಂಜುನಾಥ, ಗ್ರಾಮಸ್ಥರಾದ ಸರಸ್ವತಮ್ಮ ನಾರಾಯಣಮ್ಮ ಅವರು ಕೃಷಿಹೊಂಡದತ್ತ ಧಾವಿಸಿದರು. ಈ ವೇಳೆ ಹನುಮಂತಪ್ಪ ಮತ್ತು ಮಂಜುನಾಥ್ ಅವರು ಹೊಂಡಕ್ಕೆ ಇಳಿದು ಜಿಂಕೆಯನ್ನು ರಕ್ಷಿಸಿ, ಆರೈಕೆ ಮಾಡಿ, ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು.
ಕೂಡಲೇ ಸ್ಥಳಕ್ಕೆ ಬಂದ ಗ್ರಾಮದ ಅರಣ್ಯ ರಕ್ಷಕ ಅವಿನಾಶ್ ಅವರು ಇಲಾಖೆಯ ವಾಹನದಲ್ಲಿ ಜಿಂಕೆಯನ್ನು ತೆಗೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಅರಣ್ಯಕ್ಕೆ ಬಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.