ADVERTISEMENT

ಚಿಕ್ಕಬಳ್ಳಾಪುರ: ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಭಕ್ತ ಸಂಗಮ

ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:06 IST
Last Updated 24 ಫೆಬ್ರುವರಿ 2026, 6:06 IST
ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಠದ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು
ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಠದ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು   

ಚಿಕ್ಕಬಳ್ಳಾಪುರ: ನಗರದ ಆದಿಚುಂಚನಗಿರಿ ಮಠದ ವೀರಾಂಜನೇಯ ಸ್ವಾಮಿ ದೇವಾಲಯದ 13ನೇ ವಾರ್ಷಿಕೋತ್ಸವ, ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತಿ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಅವರ 13ನೇ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮ ವೀರಾಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

‘ಭಕ್ತ ಸಂಗಮ’ ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ವಿದ್ಯಾರ್ಥಿಗಳು, ಗಣ್ಯರು ಪಾಲ್ಗೊಂಡಿದ್ದರು. ಬೆಳಿಗ್ಗೆಯಿಂದಲೇ ದೇಗುಲದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು, ಹೋಮಗಳು ನಡೆದವು. ನಿರ್ಮಲಾನಂದನಾಥ ಸ್ವಾಮೀಜಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

ನಂತರ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ಸೂರ್ಯ ಎದ್ದ ಮೇಲೆ ಜಗತ್ತಿನ ಕೆಲಸಗಳು ಆರಂಭವಾಗುತ್ತವೆ. ಜಗತ್ತು ನಡೆಯಬೇಕು ಎಂದರೆ ಸೂರ್ಯ ಕಾರಣ. ಅದೇ ರೀತಿಯಲ್ಲಿ ನಮ್ಮ ಇಂದ್ರಿಯಗಳು ಕೆಲಸ ಮಾಡಬೇಕು ಎಂದರೆ ಮನಸ್ಸು ಕಾರಣ ಎಂದು ಹೇಳಿದರು.

ADVERTISEMENT

ಬಟ್ಟೆಯನ್ನು ಗೂಟಕ್ಕೆ ನೇತು ಹಾಕಿದಂತೆ ಜನರು ತಮ್ಮ ಮನಸ್ಸುಗಳನ್ನು ಎಲ್ಲೆಲ್ಲಿಯೊ ನೇತುಹಾಕಿರುತ್ತಾರೆ. ಯಾರು ಯಾರು ಎಲ್ಲೆಲ್ಲಿ ನೇತು ಹಾಕಿರುವರೊ ಅದಕ್ಕೆ ತಕ್ಕ ರೀತಿಯಲ್ಲಿ ಪ್ರತಿಫಲ ದೊರೆಯುತ್ತದೆ ಎಂದರು.

ಭಗವಂತನಲ್ಲಿ ಮನಸ್ಸನ್ನು ನೇತು ಹಾಕಿದರೆ ನಮ್ಮ ಮನಸ್ಸಿನಲ್ಲಿ ಭಗವಂತ ಕಾಣುತ್ತಾನೆ. ವ್ಯಾಪಾರ ವಹಿವಾಟಿನಲ್ಲಿ ನೇತುಹಾಕಿದರೆ ವ್ಯಾಪಾರ ಕಾಣುತ್ತದೆ ಎಂದರು.

ಚಿತ್ರದುರ್ಗದ ಮಾದಾರ ಗುರುಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ವೀರಾಂಜನೇಯ ಸ್ವಾಮಿ ಅವರನ್ನು ಸನಾತನ ಧರ್ಮ ರಕ್ಷಕರು ಎಂದೇ ಕರೆಯುತ್ತೇವೆ. ಆಂಜನೇಯ ಸ್ವಾಮಿಯ ತವರು ನಮ್ಮದು. ಆಂಜನೇಯ ಹುಟ್ಟಿದ ನಾಡು ನಮ್ಮದು ಎಂದರು.

ಸನಾತನ ಧರ್ಮದಲ್ಲಿ ಆದರ್ಶಕ್ಕೆ ಶ್ರೀರಾಮ ಹೇಗೆ ಪ್ರಮುಖವಾಗಿದ್ದಾರೆಯೊ ಅದೇ ರೀತಿಯಲ್ಲಿ ನಂಬಿಕೆ, ನಿಷ್ಠೆಗೆ ಮತ್ತೊಂದು ಹೆಸರೇ ಆಂಜನೇಯ. ಬಾಲಗಂಗಾಧರನಾಥ ಸ್ವಾಮೀಜಿ ಅವರು ಇಲ್ಲಿ ವೀರಾಂಜನೇಯ ಸ್ವಾಮಿ ದೇಗುಲವನ್ನು ಜೀರ್ಣೋದ್ಧಾರಗೊಳಿಸಿದ್ದಾರೆ. ಸ್ವಾಮೀಜಿ ಅವರು ನುಡಿದ ರೀತಿಯಲ್ಲಿ ನಡೆದರು ಎಂದರು.

ಚುಂಚನಗಿರಿ ಮಠ ನೋಡುಗರಿಗೆ ಜಾತಿ ಮಠ. ಆದರೆ ಅದು ಸಾಮಾಜಿಕ ನ್ಯಾಯ ನೀಡುವ ಮಠ ಎನಿಸಿದೆ ಎಂದು ಹೇಳಿದರು.

ಮಂಗಳಾನಂದ ಸ್ವಾಮೀಜಿ, ಕಬೀರಾನಂದ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಶಾಸಕ ಧೀರಜ್ ಮುನಿರಾಜು, ಕ್ರೀಡಾ ಇಲಾಖೆ ಆಯುಕ್ತ ಚೇತನ್ ಆರ್., ಐಎಎಸ್ ಅಧಿಕಾರಿ ವಸಂತ್ ಕುಮಾರ್, ಚಿಕ್ಕಬಳ್ಳಾಪುರ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮತ್ತಿತರರು ಪಾಲ್ಗೊಂಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.