ಚಿಂತಾಮಣಿ: ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿಗವಾರಹಳ್ಳಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯ ಗೊಡೆ ಕುಸಿದು ಇಬ್ಬರಿಗೆ ತೀವ್ರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದ ಕೃಷ್ಣಮೂರ್ತಿ ಹಾಗೂ ಅವರ ಪತ್ನಿ ಆದಿಲಕ್ಷ್ಮಮ್ಮ ಗಾಯಾಳುಗಳು. ಗಡಿಗವಾರಹಳ್ಳಿಯಿಂದ ದೇಶವಾರಪಲ್ಲಿ ರಸ್ತೆಯಲ್ಲಿ ನೂತನ ಮನೆ ನಿರ್ಮಾಣ ಮಾಡುತ್ತಿದ್ದರು. ರಾತ್ರಿ ಗ್ರಾಮದಲ್ಲಿ ಮಳೆಯಾಗಿದ್ದ ಕಾರಣದಿಂದ ಬೆಳಗ್ಗೆ ಪತಿ, ಪತ್ನಿ ಇಬ್ಬರೂ ನಿರ್ಮಾಣವಾಗುತ್ತಿರುವ ಮನೆಯ ಕಟ್ಟಡವನ್ನು ನೋಡಲು ಹೋಗಿದ್ದಾರೆ. ಒಂದು ಪಕ್ಕದ ಗೋಡೆ ಕುಸಿದು ಅವರ ಮೇಲೆ ಬಿದ್ದಿದೆ.
ಗ್ರಾಮಸ್ಥರು ಕೂಡಲೇ ಅವರನ್ನು ಕರೆತಂದು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿದ್ದಾರೆ.
ಕಂದಾಯ ನಿರೀಕ್ಷಕ ಮುನಿರಾಜು, ಗ್ರಾಮ ಆಡಳಿತಾಧಿಕಾರಿ ಸಂಜಯ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.