ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಆರು ದಿನಗಳಿಂದ ಯಾವುದೇ ಕೋವಿಡ್–19 ಪ್ರಕರಣಗಳು ವರದಿಯಾಗದೆ ಜನರು ನಿಟ್ಟುಸಿರು ಬಿಡುತ್ತಿದ್ದ ವೇಳೆಯಲ್ಲಿಯೇ, ಶುಕ್ರವಾರ ನಗರದ ಒಬ್ಬ ವ್ಯಕ್ತಿಯಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಏಪ್ರಿಲ್ 15ರಂದು 17ನೇ ವಾರ್ಡ್ ವ್ಯಾಪ್ತಿಯ ಅಂಜುಮನ್ ರಸ್ತೆಯ ನಿವಾಸಿ, 69 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅವರ ಸಂಪರ್ಕದಲ್ಲಿದ್ದ 19ವರ್ಷದ ಪುತ್ರ, ನೆರೆಮನೆಯ ಇಬ್ಬರು ವ್ಯಕ್ತಿಗಳಿಗೆ ಕೋವಿಡ್ ತಗುಲಿರುವುದು ಏಪ್ರಿಲ್ 17 ರಂದು ದೃಢಪಟ್ಟಿತ್ತು. ಮೃತ ವ್ಯಕ್ತಿಯಿಂದಲೇ ಇದೀಗ ಮತ್ತೊಬ್ಬ ವ್ಯಕ್ತಿಗೆ ಕೋವಿಡ್ ತಗುಲಿದೆ.
ನಗರದಲ್ಲಿ ನಾಲ್ಕು ಕೋವಿಡ್ ಪ್ರಕರಣಗಳು ವರದಿಯಾಗಿ, ಒಬ್ಬ ವ್ಯಕ್ತಿ ಕೋವಿಡ್ನಿಂದ ಮೃತಪಡುತ್ತಿದ್ದಂತೆ ಜಿಲ್ಲಾಡಳಿತ ಇಡೀ ನಗರದಾದ್ಯಂತ ಸೀಲ್ಡೌನ್ ಜಾರಿಗೊಳಿಸಿತ್ತು. ನಗರದ ಪ್ರತಿ ವಾರ್ಡ್ಗೆ ತಲಾ ಒಬ್ಬ ನೋಡಲ್ ಅಧಿಕಾರಿ, ಸ್ವಯಂ ಸೇವಕರನ್ನು ನಿಯೋಜಿಸಿ ಪರಿಸ್ಥಿತಿ ತಹಬದಿಗೆ ತರಲು ಪ್ರಯತ್ನಿಸುತ್ತಿರುವಾಗಲೇ ಮತ್ತೊಂದು ಪ್ರಕರಣ ವರದಿಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 12, ಚಿಕ್ಕಬಳ್ಳಾಪುರದ ಐದು ಜನರು ಸೇರಿದಂತೆ 17 ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದೆ. ಈ ಪೈಕಿ ಇಬ್ಬರು (ಗೌರಿಬಿದನೂರು, ಚಿಕ್ಕಬಳ್ಳಾಪುರದ ತಲಾ ಒಬ್ಬರು) ಮೃತಪಟ್ಟಿದ್ದಾರೆ. ಉಳಿದಂತೆ ಗೌರಿಬಿದನೂರಿನ 11 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಪ್ರತ್ಯೇಕ ಕ್ವಾರಂಟೈನ್ನಲ್ಲಿದ್ದಾರೆ. ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ನಾಲ್ಕು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.