ADVERTISEMENT

ಲಂಟಾನಕ್ಕೆ ಪೀಠೋಪಕರಣ ರೂಪ

ನಂದಿಗಿರಿಧಾಮದಲ್ಲಿ ಮಹಿಳೆಯರಿಗೆ 45 ದಿನ ತರಬೇತಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 6:31 IST
Last Updated 4 ನವೆಂಬರ್ 2022, 6:31 IST
ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ಲಂಟಾನದಿಂದ ಪೀಠೋಪಕರಣಗಳ ತಯಾರಿಕೆಯಲ್ಲಿ ತೊಡಗಿರುವ ಸ್ತ್ರಿ ಶಕ್ತಿ ಸಂಘದ ಸದಸ್ಯೆಯರು (ಎಡಚಿತ್ರ) ಲಂಟಾನದಿಂದ ತಯಾರಿಸಿರುವ ಪೀಠೋಪಕರಣಗಳು
ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ಲಂಟಾನದಿಂದ ಪೀಠೋಪಕರಣಗಳ ತಯಾರಿಕೆಯಲ್ಲಿ ತೊಡಗಿರುವ ಸ್ತ್ರಿ ಶಕ್ತಿ ಸಂಘದ ಸದಸ್ಯೆಯರು (ಎಡಚಿತ್ರ) ಲಂಟಾನದಿಂದ ತಯಾರಿಸಿರುವ ಪೀಠೋಪಕರಣಗಳು   

ಚಿಕ್ಕಬಳ್ಳಾಪುರ: ಲಂಟಾನ ಕಾಡನ್ನು ನಾಶ ಮಾಡುತ್ತಿರುವ ಪ್ರಬೇಧ. ಬೇಲಿಯಂತೆ ಬೆಳೆಯುತ್ತಿರುವ ಇದರ ಹಾವಳಿ ನಂದಿಬೆಟ್ಟದ ಸುತ್ತಮುತ್ತ ಹೆಚ್ಚಿದೆ. ಇಂತಿಪ್ಪ ಲಂಟಾನ ಕಳೆಯನ್ನು ನಾಶ ಮಾಡಲು ಜಿಲ್ಲಾ ಅರಣ್ಯ ಇಲಾಖೆ ವಿಶಿಷ್ಟ ಹೆಜ್ಜೆ ಇಟ್ಟಿದೆ.

ನಂದಿಬೆಟ್ಟ ಸಮೀಪದ ಸಿಂಗಾಟ ಕದಿರೇನಹಳ್ಳಿ ಗ್ರಾಮದ ಸ್ತ್ರೀ ಶಕ್ತಿ ಸಂಘಗಳ 15 ಮಹಿಳೆಯರಿಗೆ ‘ಕರಕುಶಲ ಕಲೆ–ಸ್ವಯಂ ಉದ್ಯೋಗ’ ಯೋಜನೆಯಡಿ ನಂದಿಗಿರಿಧಾಮದಲ್ಲಿ ತರಬೇತಿ ನೀಡಲಾಗುತ್ತಿದೆ.

ಲಂಟಾನದಿಂದಬುಟ್ಟಿ, ಮಂಕರಿ, ಹೂದಾನಿ, ಕುರ್ಚಿ, ಟೀಪಾಯಿ, ಹೂವಿನ ಬುಟ್ಟಿ, ಮಂಚ, ಪೆನ್ ಮತ್ತು ಪುಸ್ತಕಗಳನ್ನಿಡಕು ಕಪಾಟು ಸೇರಿದಂತೆ ವಿವಿಧಪೀಠೋಪಕರಣಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತಿದೆ.

ADVERTISEMENT

ಈ ತರಬೇತಿಗೆ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯರಿಗೆ ನಿತ್ಯ ₹ 400 ಗೌರವ ಧನ ನೀಡಲಾಗುತ್ತಿದೆ. ಪರಿಣತರಿಂದ ಪೀಠೋಪಕರಣಗಳ ತಯಾರಿಕೆಯ ಬಗ್ಗೆ ತರಬೇತಿ ಕೊಡಿಸಲಾಗುತ್ತಿದೆ. ಮಹಿಳೆಯರು ಕಾಡಿನಲ್ಲಿರುವ ಲಂಟಾನವನ್ನು ತಂದು ಇಲ್ಲಿ ಅವುಗಳಿಗೆ ಹೊಸ ರೂಪು ನೀಡುತ್ತಿದ್ದಾರೆ. ಈ ಯೋಜನೆಯಡಿ ಮಹಿಳೆಯರಿ ಪೀಠೋಪಕರಣಗಳ ತಯಾರಿಕೆಗೆ ಅಗತ್ಯವಿರುವ ಕಿಟ್ ಹಾಗೂಬಾಯ್ಲರ್ ಸಹ ನೀಡಲಾಗಿದೆ.45 ದಿನಗಳ ತರಬೇತಿಯ ನಂತರ ಮಹಿಳೆಯರು ಸ್ವ ಉದ್ಯೋಗದಲ್ಲಿ
ತೊಡಗಬಹುದು.

ಅಲಂಕಾರಿಕ ಮತ್ತು ಪೀಠೋಪಕರಣಗಳ ತಯಾರಿಕೆ ತರಬೇತಿಯಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಹುದು ಎನ್ನುವ ಆಶಯ ಯೋಜನೆಯಲ್ಲಿದೆ. ಕಸದಿಂದ ರಸ ಎನ್ನುವಂತೆ ಕಾಡಿನ ಕಳೆ ವಸ್ತುಗಳ ರೂಪು ಪಡೆಯುತ್ತಿದೆ.

ನಂದಿಬೆಟ್ಟದ ಸುತ್ತಮುತ್ತ ಹೇರಳವಾಗಿ ಲಂಟಾನ ದೊರೆಯುತ್ತದೆ. ಇದನ್ನು ಬಳಸಿಕೊಂಡು ವಸ್ತುಗಳನ್ನು ತಯಾರಿಸುವುದರಿಂದ ಲಂಟಾನ ಕಳೆ ಸಹ ನಾಶವಾಗುತ್ತದೆ. ಮಹಿಳೆಯರಿಗೆ ಉದ್ಯೋಗ ದೊರೆಯುತ್ತದೆ. ಆ ಮೂಲಕ ಆರ್ಥಿಕ ಅನುಕೂಲವಾಗುತ್ತದೆ.

ಗಿರಿಧಾಮಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳ ಜನರು ಭೇಟಿ ನೀಡುತ್ತಾರೆ. ಪ್ರವಾಸಿಗರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲು ಸಹ ಅಧಿಕಾರಿಗಳು
ಆಲೋಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.