ಚಿಂತಾಮಣಿ: ನಗರದ ಹೊರವಲಯದ ಮುರುಗಮಲ್ಲ ರಸ್ತೆಯಲ್ಲಿರುವ ಕರಿಯಪ್ಪಲ್ಲಿಯ ಮನೆಯೊಂದರಲ್ಲಿ ಭಾನುವಾರ ಅಡುಗೆ ಅನಿಲದ ಸಿಲೆಂಡರ್ ಸ್ಫೋಟಗೊಂಡು ತಾಯಿ ಮತ್ತು ಮೂವರು ಮಕ್ಕಳು ಗಾಯಗೊಂಡಿದ್ದಾರೆ.
ತಾಯಿ ಮತ್ತು ಮಗ ಗಂಭೀರವಾಗಿ ಗಾಯಗೊಂಡಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಗ್ರಾಮದ ಲಕ್ಷ್ಮೀದೇವಮ್ಮ ಎಂಬುವವರ ಮನೆಯಲ್ಲಿ ಸಿಲೆಂಡರ್ ಸ್ಫೋಟಗೊಂಡಿದ್ದು, ಮನೆಯಲ್ಲಿದ್ದ ತಾಯಿ ಲಕ್ಷ್ಮೀದೇವಮ್ಮ(33), ಮಗ ಹರ್ಷವರ್ಧನ(12) ಮತ್ತು ಲಕ್ಷ್ಮೀದೇವಮ್ಮ ಅವರ ಸಹೋದರನ ಮಕ್ಕಳಾದ ಸಂಜಯ್ (12), ಹರಿಪ್ರಿಯಾ(10) ಗಾಯಗೊಂಡಿದ್ದಾರೆ.
ಸ್ಫೋಟದ ಶಬ್ದ ಕೇಳಿ ಕೂಡಲೇ ಧಾವಿಸಿದ ಅಕ್ಕಪಕ್ಕದವರು ಗಾಯಾಳಯಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮೀದೇವಮ್ಮ ಮತ್ತು ಹರ್ಷವರ್ಧನ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಗೆ ಕಳುಹಿಸಲಾಗಿದೆ. ಸಂಜಯ್ ಮತ್ತು ಹರಿಪ್ರಿಯಾಗೆ ಸಣ್ಣಪುಟ್ಟ ಗಾಯವಾಗಿದೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಫೋಟದ ರಭಸಕ್ಕೆ ಮನೆಯ ಮೇಲ್ಚಾವಣಿಗೆ ಹಾನಿಯಾಗಿದೆ. ಮನೆಯಲ್ಲಿದ್ದ ಗೃಹಬಳಕೆಯ ವಸ್ತುಗಳು ಸುಟ್ಟುಹೋಗಿವೆ. ಸ್ಫೋಟದ ಶಬ್ದ ಬಹುದೂರದವರೆಗೂ ಕೇಳಿಸಿತು. ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿರಬಹುದು ಎಂದು ಸ್ಥಳೀಯರು ತಿಳಿಸಿದರು.
ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.