
ಚಿಂತಾಮಣಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಭಾನುವಾರ ಮಹಾಶಿವರಾತ್ರಿ ಹಬ್ಬ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಈಶ್ವರ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಮಹಾ ಕೈಲಾಸಗಿರಿ: ದಕ್ಷಿಣ ಕೈಲಾಸಗಿರಿ ಎಂದೇ ಪ್ರಸಿದ್ಧ ಅಂಬಾಜಿದುರ್ಗಾ ಬೆಟ್ಟದ ತಪ್ಪಲಿನ ಮಹಾ ಕೈಲಾಸಗಿರಿಯಲ್ಲಿ ಗಂಗಾಧರೇಶ್ವರ ಸೇವಾ ಟ್ರಸ್ಟ್ ವತಿಯಿಂದ ಶತರುದ್ರಾಭಿಷೇಕ, ಹೋಮ ಮತ್ತು ಗಿರಿಜಾ ಕಲ್ಯಾಣೋತ್ಸವ ನಡೆಯಿತು. ಚತುರ್ಮುಖಲಿಂಗೇಶ್ವರಸ್ವಾಮಿಗೆ ವಿಶೇಷ ಅಭಿಷೇಕ, ಅರ್ಚನೆ ನಡೆಯಿತು. ಭಕ್ತರ ದಟ್ಟಣೆ ನಿರ್ವಹಣೆಗಾಗಿ ಪೊಲೀಸರು ಮತ್ತು ಟ್ರಸ್ಟ್ ವಿಶೇಷ ವ್ಯವಸ್ಥೆ ಕಲ್ಪಿಸಿದ್ದರು. ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಹರಿಹರೇಶ್ವರಸ್ವಾಮಿ ದೇವಾಲಯ, ಅಜಾದ್ ಚೌಕ: ಉಮಾಮಹೇಶ್ವರಿಸ್ವಾಮಿಗೆ ವಿಶೇಷ ಅಲಂಕಾರ, ಕ್ಷೀರಾಭಿಷೇಕ, ರುದ್ರಾಭಿಷೇಕ ಮತ್ತು ಮಧ್ಯಾಹ್ನ ಮಹಾಮಂಗಳಾರತಿ ನಡೆಯಿತು. ಸಂಜೆ ಗಿರಿಜಾ ಕಲ್ಯಾಣೋತ್ಸವ ನೆರವೇರಿತು.
ಸುಂದರೇಶ್ವರಸ್ವಾಮಿ ದೇವಾಲಯ, ನಾರಸಿಂಹಪೇಟೆ: 8ನೇ ವರ್ಷದ ಮಹಾಶಿವರಾತ್ರಿ ಅಂಗವಾಗಿ ವಿವಿಧ ಶಿವಲಿಂಗ ದರ್ಶನ ಹಮ್ಮಿಕೊಳ್ಳಲಾಗಿತ್ತು.
ನಾಗನಾಥೇಶ್ವರಸ್ವಾಮಿ ದೇಗುಲ ಎನ್.ಎನ್.ಟಿ ರಸ್ತೆ: ದೇವಾಲಯದಲ್ಲಿ ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ದರ್ಶನ ಪಡೆದರು.
ಮುರುಗಮಲ್ಲ: ಪ್ರಸಿದ್ಧ ಯಾತ್ರಾಸ್ಥಳವಾದ ಮುರುಗಮಲ್ಲ ಬೆಟ್ಟದ ಮುಕ್ತೀಶ್ವರಸ್ವಾಮಿ ದೇವಾಲಯದಲ್ಲಿ ಜಾತ್ರೆ ವಾತಾವರಣ ನಿರ್ಮಾಣವಾಗಿತ್ತು. ಭಕ್ತರಿಗೆ ಫಲಹಾರದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.