ADVERTISEMENT

ಚಿಂತಾಮಣಿ: ಉತ್ತಮ ಫಸಲು ನಿರೀಕ್ಷೆಯಲ್ಲಿ ಮಾವು ಬೆಳೆಗಾರರು

ಹೂವುಗಳಿಂದ ಕಂಗೊಳಿಸುತ್ತಿರುವ ಮರಗಳು

ಎಂ.ರಾಮಕೃಷ್ಣಪ್ಪ
Published 22 ಜನವರಿ 2026, 5:33 IST
Last Updated 22 ಜನವರಿ 2026, 5:33 IST
<div class="paragraphs"><p><strong>ಚಿಂತಾಮಣಿ ತಾಲ್ಲೂಕಿನಲ್ಲಿ ಮಾವಿನ ತೋಟವೊಂದರಲ್ಲಿ ಹೂವಿನಿಂದ ಕಂಗೊಳಿಸುತ್ತಿರುವ ಮರ</strong></p></div>

ಚಿಂತಾಮಣಿ ತಾಲ್ಲೂಕಿನಲ್ಲಿ ಮಾವಿನ ತೋಟವೊಂದರಲ್ಲಿ ಹೂವಿನಿಂದ ಕಂಗೊಳಿಸುತ್ತಿರುವ ಮರ

   

ಚಿಂತಾಮಣಿ: ಮಾವಿನ ಮರಗಳು ಹೂವು ಬಿಡುವ ಹಂಗಾಮು ಆರಂಭವಾಗಿದೆ. ಜನವರಿ ಆರಂಭದಲ್ಲೇ ಮಾವಿನ ಮರಗಳು ಹೂವುಗಳಿಂದ ಕಂಗೊಳಿಸುತ್ತಿವೆ. ಹೀಗಾಗಿ, ಈ ವರ್ಷ ಉತ್ತಮ ಫಸಲಿನ ನೀರೀಕ್ಷೆಯಲ್ಲಿದ್ದಾರೆ ಮಾವು ಬೆಳೆಗಾರರು.

ಸಾಮಾನ್ಯವಾಗಿ ಡಿಸೆಂಬರ್ ಕೊನೆ ವಾರದಿಂದ ಜನವರಿ ಕೊನೆವರೆಗೆ ಮಾವಿನ ಮರಗಳು ಹೂವು ಬಿಡುತ್ತವೆ. ಈಗಾಗಲೇ ಕೆಲವು ತಳಿಗಳ ಮರಗಳು ಹೂವು ಬಿಡುತ್ತಿವೆ. ಬೆಳೆಗೆ ಪೂರಕ ವಾತಾವರಣವಿದ್ದು, ಮಾವಿನ ಮರಗಳು ಯಥೇಚ್ಛವಾಗಿ ಹೂ ಕಟ್ಟಿವೆ. ಬೆಳೆಗಾರರು ಉತ್ತಮ ಇಳುವರಿಯ ಕನಸು ಕಾಣುತ್ತಿದ್ದಾರೆ.

ADVERTISEMENT

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 8,972 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 4,833 ಹೆಕ್ಟೇರ್ ಪ್ರದೇಶದಲ್ಲಿದೆ. ಇದೇ ಕಾರಣಕ್ಕೆ ಚಿಂತಾಮಣಿ ಮತ್ತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕುಗಳನ್ನು ಮಾವಿನ ಮಡಿಲು ಎಂದೂ ಕರೆಯಲಾಗುತ್ತದೆ. ಈ ಎರಡೂ ತಾಲ್ಲೂಕುಗಳು ಹಣ್ಣುಗಳ ರಾಜ ಎಂದೇ ಪ್ರಸಿದ್ಧಿ ಪಡೆದ ಮಾವಿನ ಹಣ್ಣಿಗೆ ಖ್ಯಾತಿಯಾಗಿವೆ.

ರಾಜ್ಯದ ಒಟ್ಟು ಮಾವಿನ ಉತ್ಪಾದನೆಯ ಶೇ 50ರಷ್ಟು ಪ್ರಮಾಣದ ಹಣ್ಣುಗಳು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲೇ ಉತ್ಪಾದನೆಯಾಗುತ್ತವೆ.

ಮಾವಿನ ಮರಗಳು ಹೂ ತುಂಬಿಕೊಂಡು ನಳನಳಿಸುತ್ತಿವೆ. ಚಳಿ ಹೀಗೆಯೇ ಇದ್ದರೆ ಮಾವು ಸಮೃದ್ಧವಾಗಿ ಬರುತ್ತದೆ ಎನ್ನುತ್ತಾರೆ ಬೆಳೆಗಾರರು. ಕಳೆದ ವರ್ಷವೂ ಹೂವಿನ ಪ್ರಮಾಣ ಹೆಚ್ಚಿತ್ತು. ಮೋಡ ಕವಿದ ವಾತಾವರಣದಿಂದ ಬೂದುರೋಗ ತಗಲಿತ್ತು. ಈ ಬಾರಿ ಮೋಡದ ವಾತಾವರಣ ಇಲ್ಲದಿರುವುದು ಮಾವು ಬೆಳೆಗಾರರಲ್ಲಿ ಲಾಭದ ನಿರೀಕ್ಷೆ ಹೆಚ್ಚಾಗಿದೆ.

ಮಳೆ ಕೊರತೆ, ಅಂತರ್ಜಲ ಕುಸಿತ, ಕೂಲಿ ಕಾರ್ಮಿಕರ ಕೊರತೆ, ಬೆಲೆ ಕುಸಿತ, ಉತ್ಪಾದನಾ ವೆಚ್ಚ ಅಧಿಕ ಮುಂತಾದ ಕಾರಣಗಳಿಂದ ರೈತರು ತರಕಾರಿ, ಹೂ, ಆಹಾರ ಧಾನ್ಯಗಳ ಬೆಳೆಗೆ ಬದಲಾಗಿ ಮಾವಿನ ಮರ ನೆಡಲು ಆರಂಭಿಸಿದರು.

ಮರಗಳಲ್ಲಿ ಸಮೃದ್ಧವಾಗಿ ಹೂಕಟ್ಟಿದ ಮಾತ್ರಕ್ಕೆ ಹೆಚ್ಚಿನ ನಿರೀಕ್ಷೆ ಹೊಂದುವುದು ಸರಿಯಲ್ಲ. ಇನ್ನೂ ಹಲವಾರು ಹಂತಗಳನ್ನು ದಾಟಬೇಕಿದೆ. ಕಳೆದ ವರ್ಷವೂ ಆರಂಭದಲ್ಲಿ ಹೆಚ್ಚಿನ ಹೂ ಕಟ್ಟಿತ್ತು. ಉತ್ತಮ ಇಳುವರಿಯೂ ಆಗಿತ್ತು. ಆದರೆ, ದರ ಕುಸಿತವಾಗಿದ್ದರಿಂದ ಬೆಳೆಗಾರರು ನಷ್ಟ ಅನುಭವಿಸಿದ್ದರು. ಆಗ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿತ್ತು.

ಮಾವಿನ ಮರಗಳು ಹೂಗಳಿಂದ ಕಂಗೊಳಿಸುತ್ತಿದ್ದರೂ, ಕಾಯಿ ಕಟ್ಟದೆ ಉದುರಿದರೆ ಬೆಳೆಗಾರರಿಗೆ ಮತ್ತೆ ನಷ್ಟವಾಗಲಿದೆ. ಜಿಗಿಹುಳು, ಬೂದಿರೋಗ ಕಾಣಿಸಿಕೊಂಡರೆ ಇಳುವರಿ ಕಡಿಮೆ ಆಗುತ್ತದೆ
ಎನ್.ನಾಗಿರೆಡ್ಡಿ, ಮಾವು ಬೆಳೆಗಾರ

ರೋಗ ವ್ಯಾಪಿಸಿದಂತೆ ಎಚ್ಚರ ವಹಿಸಿ

ಮಾವು ಹೂ ಬಿಡುವ ಮತ್ತು ಕಾಯಿ ಕಟ್ಟುವ ಹಂಗಾಮಿನಲ್ಲಿ ಜಿಗಿಹುಳು, ಬೂದಿರೋಗ, ನುಸಿ, ಹಿಟ್ಟು ತಿಗಣೆ ಮುಂತಾದ ಕೀಟಗಳಿಂದ ಹೆಚ್ಚಿನ ಹಾನಿ ಉಂಟಾಗುತ್ತದೆ. ಬೆಳೆಗಾರರು ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಬೆಳೆಗೆ ಈ ರೋಗಗಳು ವ್ಯಾಪಿಸದಂತೆ ನಿಯಂತ್ರಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಎಂ. ಗಾಯಿತ್ರಿ ಸಲಹೆ ನೀಡುತ್ತಾರೆ. 

ಮಾವು ಬೆಳೆಯ ಸಂರಕ್ಷಣೆ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಅಧಿಕಾರಿಗಳು ಅಥವಾ ಮಾವು ಅಭಿವೃದ್ಧಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಅವರು ಹೇಳಿದ್ದಾರೆ. 

ಹೆಚ್ಚಿನ ಚಳಿ, ಇಬ್ಬನಿ ಮಾವಿನ ಬೆಳೆಗೆ ಪೂರಕವಾಗಿದ್ದು, ಈಗಾಗಲೇ ಶೇ 70 ರಷ್ಟು ಹೂ ಕಟ್ಟಿದೆ. ಇನ್ನು ಜನವರಿ ಕೊನೆವರೆಗೆ ಮಾವಿನ ಮರಗಳಲ್ಲಿ ಹೂ ಬರುತ್ತದೆ. ಹವಾಮಾನದಲ್ಲಿ ಹೆಚ್ಚಿನ ವೈಪರೀತ್ಯಗಳು ಸಂಭವಿಸದಿದ್ದರೆ, ಈ ವರ್ಷವೂ ಒಳ್ಳೆಯ ಉತ್ಪಾದನೆ ನಿರೀಕ್ಷಿಸಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.