
ಚಿಂತಾಮಣಿ: ಡಾ.ಎಂ.ಸಿ.ಸುಧಾಕರ್ ಸಚಿವರಾದ ನಂತರ ಚಿಂತಾಮಣಿ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಚುರುಕುಗೊಂಡಿವೆ. ಈಗ ಮತ್ತೆ ಮಾ.6ರ ಬಜೆಟ್ನಲ್ಲಿ ಈ ಕ್ಷೇತ್ರಕ್ಕೆ ಯಾವ ಯೋಜನೆಗಳು ದೊರೆಯುತ್ತದೆ ಎನ್ನುವ ಕುತೂಹಲ ನಾಗರಿಕರದ್ದಾಗಿದೆ.
ಅಭಿವೃದ್ಧಿಯ ಅಂಕಿ ಸಂಖ್ಯೆಗಳನ್ನು ಜಿಲ್ಲೆಯಲ್ಲಿಯೇ ಹೆಚ್ಚು ಕಾಮಗಾರಿಗಳು ನಡೆಯುತ್ತಿರುವುದು ಮತ್ತು ದೊಡ್ಡ ಯೋಜನೆಗಳು ಮಂಜೂರಾಗಿರುವುದು ಚಿಂತಾಮಣಿಗೆ.
ಜಿಲ್ಲೆಯಲ್ಲಿ ಚಿಂತಾಮಣಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ವಾಣಿಜ್ಯ ಕೇಂದ್ರವಾಗಿದೆ. ವ್ಯಾಪಾರ, ವಹಿವಾಟಿನಲ್ಲಿ ಜಿಲ್ಲಾ ಕೇಂದ್ರಕಿಂತ ಮುಂದಿದೆ. ಪ್ರಸ್ತುತ ಚಿಂತಾಮಣಿಯ ಜನಸಂಖ್ಯೆ ಒಂದು ಲಕ್ಷ ದಾಟಿದೆ. ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ.
ನಗರದ ಸಂಚಾರಿ ವ್ಯವಸ್ಥೆಯನ್ನು ಉತ್ತಮ ಪಡಿಸಲು ಟ್ರಾಫಿಕ್ ಪೊಲೀಸ್ ಠಾಣೆಯ ಅಗತ್ಯವಿದೆ. ಕಳೆದ 10 ವರ್ಷಗಳಿಂದ ಪ್ರತಿವರ್ಷ ಇಲಾಖೆಯಿಂದ ಪ್ರಸ್ತಾವ ಸಲ್ಲಿಕೆಯಾಗುತ್ತಿದೆ. ಮಂಜೂರು ಮಾತ್ರ ಆಗದೆ ನನೆಗುದಿಗೆ ಬಿದ್ದಿದೆ. ಈ ಬಾರಿಯ ಬಜೆಟ್ ನಲ್ಲಾದರೂ ಮೋಕ್ಷ ಸಿಗುವುದೇ? ಎಂಬುದು ನಾಗರಿಕರ ನಿರೀಕ್ಷೆಯಾಗಿದೆ.
ತಾಲ್ಲೂಕಿನ ಇತಿಹಾಸ ಪ್ರಸಿದ್ದ ಪ್ರವಾಸಿ ಕೇಂದ್ರಗಳಾದ ಕೈವಾರ, ಮುರುಗಮಲ್ಲ, ಆಲಂಬಗಿರಿ ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ಆಸಕ್ತಿ ತೋರುವುದೇ? ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಟಮೆಟೊ, ಮಾವು ಸಂಸ್ಕರಣಾ ಘಟಕಗಳನ್ನು ತೆರೆಯುವುದು, ನಗರದಲ್ಲಿ ಎಂಜಿ.ರಸ್ತೆಯ ವಿಸ್ತರಣೆ, ಜೋಡಿ ರಸ್ತೆಯಲ್ಲಿ ನಿರುಪಯುಕ್ತವಾಗಿರುವ ಹಳೆಯ ಟಿಪಿಎಸ್ ಕಟ್ಟಡದ ನವೀಕರಣದ ಬೇಡಿಕೆಗಳಿಗೆ ಸ್ಪಂದನೆ ಸಿಗುವುದೇ ಎಂಬ ಕಾತುರದಲ್ಲಿ ಇದ್ದಾರೆ.
ತಾಲ್ಲೂಕು ಒಣಭೂಮಿ ಪ್ರದೇಶವಾಗಿದೆ. ಪ್ರತಿವರ್ಷವೂ ಅನಾವೃಷ್ಟಿಗೆ ತುತ್ತಾಗುತ್ತಿದೆ. ಅಂತರ್ಜಲ ವೃದ್ಧಿಗಾಗಿ ಬಯಲು ಸೀಮೆಯ ಕೆರೆಗಳಿಗೆ ನೀರು ಹರಿಸುವ ಕೆ.ಸಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳಲ್ಲಿ ಚಿಂತಾಮಣಿ ತಾಲ್ಲೂಕು ತಾರತಮ್ಯಕ್ಕೆ ಒಳಗಾಗಿತ್ತು.
ಡಾ.ಎಂ.ಸಿ.ಸುಧಾಕರ್ ಸಚಿವರಾದ ನಂತರ ಎಚ್.ಎನ್.ವ್ಯಾಲಿಯಲ್ಲಿ 119 ಕೆರೆಗಳನ್ನು ತುಂಬಿಸುವ ₹ 250 ಕೋಟಿ ಯೋಜನೆ, ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಕನಂಪಲ್ಲಿ ಕೆರೆ, ನೆಕ್ಕುಂದಿಕೆರೆ ಮತ್ತು ಭಕ್ತರಹಳ್ಳಿ ಅರಸೀಕೆರೆ ಯೋಜನೆಗಳನ್ನು ಮಂಜೂರು ಮಾಡಿಸಿದ್ದಾರೆ. ಈ ಬಜೆಟ್ನಲ್ಲಿ ಮತ್ತೆ ಚಿಂತಾಮಣಿಗೆ ನೀರಾವರಿ ವಿಚಾರದಲ್ಲಿ ಅನುದಾನದ ನಿರೀಕ್ಷೆಗಳನ್ನು ನಾಗರಿಕರು ಹೊಂದಿದ್ದಾರೆ.
ಚಾಲನೆಯಲ್ಲಿರುವ ಪ್ರಮುಖ ಯೋಜನೆಗಳು: ಬಹುದಿನಗಳ ಬೇಡಿಕೆಯಾದ ಎಂಜಿನಿಯರಿಂಗ್ ಕಾಲೇಜು ಮಂಜೂರಾಗಿದ್ದು ಕಾರ್ಯಾರಂಭವಾಗಿದೆ. ಅಂಬೇಡ್ಕರ್ ಮತ್ತು ವಾಲ್ಮೀಕಿ ಭವನಗಳ ಕಾಮಗಾರಿ ಮುಕ್ತಾಯದ ಹಂತದಲ್ಲಿವೆ. ಏಪ್ರಿಲ್ನಲ್ಲಿ ನಡೆಯುವ ಅಂಬೇಡ್ಕರ್ ಜಯಂತಿಯನ್ನು ಭವನದಲ್ಲಿಯೇ ಆಚರಿಸಲು ನಿರ್ಧರಿಸಲಾಗಿದೆ.
ನಗರದ ಸಾರ್ವಜನಿಕ ಅಸ್ಪತ್ರೆ ಮತ್ತು ಮಹಿಳಾ ಮತ್ತು ಮಕ್ಕಳ ಅಸ್ಪತ್ರೆಯ ಆಧುನೀಕರಣ ಹಾಗೂ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. 50 ಹಾಸಿಗೆಗಳ ಮತ್ತೊಂದು ಅಸ್ಪತ್ರೆಯ ಕಾಮಗಾರಿಯು ಸಹ ಭರದಿಂದ ಸಾಗುತ್ತಿದೆ. ಐ.ಟಿ.ಐ ಕಾಲೇಜು ಮತ್ತು ಎ.ಆರ್.ಟಿ.ಒ ಕಚೇರಿಯ ಕಟ್ಟಡದ ಕಾಮಗಾರಿಗಳು ಚುರುಕುಗೊಂಡಿದೆ.
ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಗಳಲ್ಲಿ ಮೂರನೆಯದಾದ ನಗರದ ಸರ್ಕಾರಿ ಪಾಲಿಟೆಕ್ನಿಕ್ ಗೆ 76 ವರ್ಷಗಳಾಗಿದೆ. ಇದರ ಆಧುನೀಕರಣಕ್ಕಾಗಿ ₹ 76 ಕೋಟಿ, ನಗರದ ಒಳಚರಂಡಿ ವ್ಯವಸ್ಥೆಯ ಆಧುನೀಕರಣಕ್ಕಾಗಿ ₹ 42 ಕೋಟಿ ಮಂಜೂರಾಗಿದ್ದು ಕಾಮಗಾರಿ ವೇಗವಾಗಿ ನಡೆಯುತ್ತಿವೆ.
ನಗರದ ಹೃದಯಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕ್ರಿಟಿಕಲ್ ಕೇರ್ ಅಸ್ಪತ್ರೆ ಸೇರಿ 600 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದು, ಅಸ್ಪತ್ರೆಗಳ ಉತ್ತಮ ನಿರ್ವಹಣೆಗಾಗಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಚಿಂತನೆಯನ್ನು ಡಾ.ಎಂ.ಸಿ.ಸುಧಾಕರ್ ಹೊಂದಿದ್ದಾರೆ.
ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಜಾಗ ಸಹ ಗುರುತಿಸಿದ್ದಾರೆ. ಈಗಾಗಲೇ ಹಲವಾರು ಖಾಸಗಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವಿಚಾರವು ಬಜೆಟ್ನಲ್ಲಿ ಪ್ರಸ್ತಾಪವಾಗುವುದೇ ಎಂಬ ನಿರೀಕ್ಷೆ ಕ್ಷೇತ್ರದ ಜನರಲ್ಲಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಮತ್ತು ಸರ್ಕಾರಿ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಕಟ್ಟಡಗಳ ವಿಸ್ತರಣೆ ಮತ್ತು ಆಧುನೀಕರಣದ ಕಾಮಗಾರಿಗಳು, ಝಾನ್ಸಿ ಕ್ರೀಡಾಂಗಣದ ಸಿಂಥೆಟಿಕ್ ಟ್ರಾಕ್ ಕಾಮಗಾರಿ, ಕ್ರಿಕೆಟ್ ಸ್ಟೇಡಿಯಂ ಯೋಜನೆಗಳು ಸಾಕಾರಗೊಂಡಿವೆ.
ತಾಲ್ಲೂಕಿನ ಪ್ರಸಿದ್ದ ಯಾತ್ರಾಸ್ಥಳವಾದ ಕೈವಾರ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಹಾಗೂ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಕೈವಾರದಲ್ಲಿ ಅರಣ್ಯ ಇಲಾಖೆಯ ತಪೋವನ ಮುಚ್ಚುವ ಹಂತಕ್ಕೆ ಬಂದಿದೆ. ಪುರಾಣ ಪ್ರಸಿದ್ಧವಾದ ಅಮರನಾರೇಯಣಸ್ವಾಮಿ ದೇವಾಲಯ ಅಭಿವೃದ್ಧಿ ಕಂಡಿಲ್ಲ. ದೇವಾಲಯದ ಸುತ್ತಲೂ ಇದ್ದ ಕಟ್ಟಡಗಳು ಶಿಥಿಲವಾಗಿವೆ. ಸಾವಿರಾರು ಜನರು ಭೇಟಿ ನೀಡುವ ದೇವಾಲಯದಲ್ಲಿ ಕನಿಷ್ಠ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯು ಇಲ್ಲ. ಕೈವಾರದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಪ್ರಗತಿಗೆ ವಿಫುಲ ಅವಕಾಶವಿದೆ. ಪ್ರವಾಸಿ ತಾಣದ ಅಭಿವೃದ್ಧಿ, ಸುಸಜ್ಜಿತ ಗ್ರಾಮೀಣ ರಸ್ತೆಗಳ ನಿರೀಕ್ಷೆ ಜನತೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.