
ಚಿಕ್ಕಬಳ್ಳಾಪುರ: ನಗರದ ಹೊರವಲಯದ ಚಿತ್ರಾವತಿಯ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಥೋತ್ಸವ ಶನಿವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಜಾತ್ರೆಯ ಅಂಗಳದಲ್ಲಿ ಸಿದ್ಧತೆಗಳು ಜೋರಾಗಿದ್ದವು.
ಡಿವೈಎಸ್ಪಿ ಪ್ರಕಾಶ್, ಗ್ರಾಮಾಂತರ ಠಾಣೆ ಪಿಎಸ್ಐ ಶರಣಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ದೇಗುಲದ ಆವರಣದಲ್ಲಿ ಅಲಂಕಾರ ಸಹ ಮಾಡಲಾಗಿದೆ.
ಗುರುವಾರದಿಂದಲೇ ಜಾತ್ರಾ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿವೆ. ಶನಿವಾರ ಬೆಳಿಗ್ಗೆ ರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ 12.15ರಿಂದ 1.30ಕ್ಕೆ ಬ್ರಹ್ಮರಥೋತ್ಸವ ಜರುಗಲಿದೆ. ರಾತ್ರಿ ದೂಳೋತ್ಸವ ನಡೆಯಲಿದೆ.
ಶುಕ್ರವಾರ ಜಾತ್ರೆಯ ಅಂಗಳದಲ್ಲಿ ಆಟಿಕೆಗಳು, ಬುರುಗು, ಬತ್ತಾಸ್, ಐಸ್ಕ್ರೀಂ, ಸಿಹಿ ತಿನಿಸುಗಳ ಅಂಗಡಿಗಳು ತಲೆ ಎತ್ತಿದ್ದವು. ಮತ್ತೊಂದಿಷ್ಟು ಅಂಗಡಿಗಳು ಆರಂಭವಾಗುತ್ತಿದ್ದವು.
ಚಿತ್ರಾವತಿ ಜಾತ್ರೆಯಲ್ಲಿ ಜಾನುವಾರುಗಳ ಸಂತೆಗೆ ತನ್ನದೇ ಆದ ಮಹತ್ವವಿದೆ. ಜಿಲ್ಲೆಯ ವಿವಿಧ ಭಾಗಗಳ ರೈತರು ಇಲ್ಲಿಗೆ ರಾಸುಗಳನ್ನು ತರುವರು. ಆದರೆ ಈ ಬಾರಿ ರಾಸುಗಳ ಜಾತ್ರೆಗೆ ಯಾವುದೇ ಸಿದ್ಧತೆಗಳು ನಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.