ADVERTISEMENT

ಬಿಜೆಪಿ ಮಾಡದಿದ್ದನ್ನು ನಾವು ಮಾಡಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪಿಎಂ–ಕುಸುಮ್ ‘ಸಿ’ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:29 IST
Last Updated 11 ಜೂನ್ 2025, 14:29 IST
ಗೌರಿಬಿದನೂರು ತಾಲ್ಲೂಕಿನ ಹನುಮೇನಹಳ್ಳಿಯಲ್ಲಿ ಪಿಎಂ–ಕುಸುಮ್ ‘ಸಿ’ ಯೋಜನೆಯಡಿ ಸ್ಥಾಪಿಸಿರುವ ಸೋಲಾರ್ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವರಾದ ಕೆ.ಜೆ.ಜಾರ್ಜ್, ಡಾ.ಎಂ.ಸಿ.ಸುಧಾಕರ್, ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಕ್ರೆಡಲ್ ಅಧ್ಯಕ್ಷ ಡಿ.ಟಿ.ರಾಜೇಗೌಡ ಚಿತ್ರದಲ್ಲಿ ಇದ್ದಾರೆ
ಗೌರಿಬಿದನೂರು ತಾಲ್ಲೂಕಿನ ಹನುಮೇನಹಳ್ಳಿಯಲ್ಲಿ ಪಿಎಂ–ಕುಸುಮ್ ‘ಸಿ’ ಯೋಜನೆಯಡಿ ಸ್ಥಾಪಿಸಿರುವ ಸೋಲಾರ್ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವರಾದ ಕೆ.ಜೆ.ಜಾರ್ಜ್, ಡಾ.ಎಂ.ಸಿ.ಸುಧಾಕರ್, ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಕ್ರೆಡಲ್ ಅಧ್ಯಕ್ಷ ಡಿ.ಟಿ.ರಾಜೇಗೌಡ ಚಿತ್ರದಲ್ಲಿ ಇದ್ದಾರೆ   

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿಯಲ್ಲಿ ಬುಧವಾರ ಪಿಎಂ–ಕುಸುಮ್ ‘ಸಿ’ ಯೋಜನೆಯಡಿ ಸ್ಥಾಪಿಸಿರುವ ಸೋಲಾರ್ ಘಟಕ ಲೋಕಾರ್ಪಣೆಗೊಳಿಸಿದರು.

ನಂತರ ಗೌರಿಬಿದನೂರಿನಲ್ಲಿ ನಡೆದ ರಾಜ್ಯ ಮಟ್ಟದ ಈ ಕಾರ್ಯಕ್ರಮದಲ್ಲಿ ಗದಗ, ಚಾಮರಾಜನಗರ, ತುಮಕೂರು ಜಿಲ್ಲೆಯ ಸೋಲಾರ್ ಘಟಕಗಳನ್ನೂ ಆನ್‌ಲೈನ್ ಮೂಲಕ ಉದ್ಘಾಟಿಸಿದರು. ಈ ಮೂರು ಜಿಲ್ಲೆಗಳ ರೈತರು ಮತ್ತು ಜನಪ್ರತಿನಿಧಿಗಳು ಮುಖ್ಯಮಂತ್ರಿ ಜತೆ ಸಂವಾದ ನಡೆಸಿದರು.

ಸಂವಾದದ ವೇಳೆ ಮುಖ್ಯಮಂತ್ರಿ, ‘ಕುಸುಮ್ ‘ಸಿ’ ಯೋಜನೆಯಲ್ಲಿ ಕೇಂದ್ರದ ಪಾಲು ಶೇ30, ರಾಜ್ಯದ ಪಾಲು ಶೇ50 ಮತ್ತು ಹೂಡಿಕೆದಾರರ ಪಾಲು ಶೇ20. ಆದರೂ, ಕೇಂದ್ರ ಸರ್ಕಾರ ಇದು ನನ್ನ ಯೋಜನೆ ಎನ್ನುತ್ತಿದೆ. 2021ರಲ್ಲಿ ಈ ಯೋಜನೆ ರಾಜ್ಯದಲ್ಲಿ ಜಾರಿ ಆಗಬೇಕಾಗಿತ್ತು. ಆದರೆ, ಅಂದಿನ ಬಿಜೆಪಿ ಸರ್ಕಾರವೇ ಜಾರಿಗೊಳಿಸಲಿಲ್ಲ. ಬಿಜೆಪಿ ರೈತರ ಪರವಾಗಿ ಇದ್ದಿದ್ದರೆ ಯೋಜನೆ ಅನುಷ್ಠಾನಗೊಳಿಸುತ್ತಿತ್ತು. ಒಂದು ಯುನಿಟ್ ವಿದ್ಯುತ್ ಸಹ ಅವರು ಉತ್ಪಾದಿಸಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆ ಅನುಷ್ಠಾನಗೊಳಿಸಿದ್ದೇವೆ. ರೈತರ ಪರ ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಒತ್ತಿ ಹೇಳಿದರು. 

ADVERTISEMENT

ಸಂವಾದದಲ್ಲಿ ಪಾಲ್ಗೊಂಡಿದ್ದ ಗದಗ ಜಿಲ್ಲೆ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಸ್‌.ವಿ.ಸಂಕನೂರ, ‘ನಮ್ಮ ಸರ್ಕಾರವೂ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಿದೆ. ಆದರೆ, ನೀವು ಅನುಷ್ಠಾನಗೊಳಿಸಿದ್ದೀರಿ. ನಾವು ಏನು ಮಾಡಿಲ್ಲ ಎನ್ನಬೇಡಿ ಸರ್. ನಮ್ಮ ಕೊಡುಗೆಯೂ ಯೋಜನೆ ಅನುಷ್ಠಾನಕ್ಕೆ ಇದೆ’ ಎಂದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ, ಸೋಲಾರ್ ಘಟಕ ಅಳವಡಿಸಲು ಖಾಸಗಿಯವರಿಂದ ಗುತ್ತಿಗೆ ಪಡೆಯುತ್ತಿರುವ ಜಮೀನಿಗೆ ವಾರ್ಷಿಕ ₹25 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸಬೇಕು ಎಂದು ಕೋರಿದರು. ಆಗ ಮುಖ್ಯಮಂತ್ರಿ ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸೋಣ ಎಂದರು. ತಿಪಟೂರು ಶಾಸಕ ಕೆ.ಷಡಕ್ಷರಿ ಸಹ ಸಂವಾದದಲ್ಲಿ ಭಾಗಿಯಾಗಿದ್ದರು.

60 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ: ‘ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ 4 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಹೆಚ್ಚಿಸಿದೆ. ಈಗ ರಾಜ್ಯದಲ್ಲಿ 30 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಮುಂದಿನ ಮೂರು ವರ್ಷದಲ್ಲಿ 60 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತೇವೆ’ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಕುಸುಮ್ ‘ಸಿ’ ಯೋಜನೆ ಮೂಲಕ 2,400 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಇದರಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಬೆಳಗ್ಗಿನ ಸಮಯದಲ್ಲಿಯೇ 7 ತಾಸು ವಿದ್ಯುತ್ ನೀಡಲಾಗುವುದು ಎಂದರು. 

‘ನಮ್ಮ ಸರ್ಕಾರ ಪ್ರತಿವರ್ಷ ಇಂಧನ ಇಲಾಖೆ ಮೂಲಕ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ₹19,000 ಕೋಟಿ ಸಹಾಯಧನ ನೀಡುತ್ತಿದೆ’ ಎಂದು ತಿಳಿಸಿದರು.

* ಆನ್‌ಲೈನ್ ಮೂಲಕ ಗದಗ, ಚಾಮರಾಜನಗರ, ತುಮಕೂರು ಜಿಲ್ಲೆಯ ಸೋಲಾರ್ ಘಟಕಗಳ ಉದ್ಘಾಟನೆ

* ಕುಸುಮ್ ‘ಸಿ’  ಯೋಜನೆ ಮೂಲಕ 2,400 ಮೆಗಾವಾಟ್ ವಿದ್ಯುತ್ ಉತ್ಪಾದನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.