
ಶಿಡ್ಲಘಟ್ಟ: ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ವಿದ್ಯಾರ್ಥಿಗಳು ಸಮುದಾಯ ಸಹಾಯಕರ ದಿನವನ್ನು ಆಚರಿಸಿದರು. ಪುಟ್ಟಪುಟ್ಟ ಮಕ್ಕಳು ತಾವು ಭವಿಷ್ಯದಲ್ಲಿ ಆಯ್ಕೆ ಮಾಡಲು ಉದ್ದೇಶವಿರುವ ವಿವಿಧ ವೃತ್ತಿಗಳಿಗೆ ತಕ್ಕಂತೆ ವೇಷ ಧರಿಸಿಕೊಂಡು ಬಂದು ಸಮುದಾಯಕ್ಕೆ ಆ ವೃತ್ತಿಯ ಮೂಲಕ ಹೇಗೆ ನೆರವಾಗುತ್ತೇವೆ ಎಂಬುದನ್ನು ವಿವರಿಸಿದರು.
ನಗರಸಭೆ ಪೌರಾಯುಕ್ತೆ ಜಿ.ಅಮೃತ ಮಾತನಾಡಿ, ‘ಈಗಿನ ಮಕ್ಕಳೆ ಭವಿಷ್ಯತ್ತಿನ ರೂವಾರಿಗಳು. ತಮ್ಮ ಮುಂದಿನ ಭವಿಷ್ಯದ ಕುರಿತಾದ ಚಿಂತನೆ ನಡೆಸಲು, ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲು ಕಾರ್ಯಕ್ರಮ ಸಹಕಾರಿಯಾಗಿದೆ. ಅಲ್ಲದೆ ಮಕ್ಕಳಿಗೆ ಸಮಾಜದ ವಿವಿಧ ವೃತ್ತಿಗಳ ಬಗ್ಗೆ ಅವಗಾಹನೆಯೂ ಉಂಟಾಗುತ್ತದೆ. ತಮ್ಮ ಇಚ್ಛೆ ಮತ್ತು ಆಸಕ್ತಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ವೃತ್ತಿಪರ ಶಿಕ್ಷಣ ಪಡೆಯಲು ಮಕ್ಕಳಿಗೆ ಸಹಕಾರಿ’ ಎಂದರು.
ಸಮಾಜದಲ್ಲಿ ಸಮುದಾಯಕ್ಕೆ ಸಹಕಾರಿಯಾಗಬಹುದಾದ ಹಲವಾರು ವೃತ್ತಿಗಳಿವೆ. ಯಾವುದೂ ಕೀಳಲ್ಲ, ಯಾವುದೂ ಮೇಲಲ್ಲ. ಮಕ್ಕಳು ಸತತ ಪರಿಶ್ರಮದಿಂದ ಮಾತ್ರ ಜ್ಞಾನವಂತರಾಗಲು ಸಾಧ್ಯ ಎಂದರು.
ಬಿಜೆಪಿ ತಾಲ್ಲೂಕು ಗ್ರಾಮಾಂತರ ಮಂಡಲ್ ಅಧ್ಯಕ್ಷ ಸೀಕಲ್ ಆನಂದ ಗೌಡ ಮಾತನಾಡಿ, ಇಂದಿನ ಮಕ್ಕಳಲ್ಲಿ ಬೌದ್ಧಿಕ ಮಟ್ಟ ಹೆಚ್ಚಿದೆ. ಗುಣಮಟ್ಟದ ಶಿಕ್ಷಣ ದೊರೆತಲ್ಲಿ ಭವ್ಯ ಭಾರತದ ಉತ್ತಮ ಪ್ರಜೆಗಳಾಗುತ್ತಾರೆ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಶಿಕ್ಷಣ ಸಂಸ್ಥೆ ಮಾಡಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸುಬ್ಬಾರೆಡ್ಡಿ ಮಾತನಾಡಿ, ಮಕ್ಕಳಲ್ಲಿ ಸಮುದಾಯದ ಕುರಿತಾದ ಪ್ರೀತಿ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಇತರರಿಗೂ ಪ್ರೇರಕವಾಗಿದೆ ಎಂದರು.
ಸಮುದಾಯಕ್ಕೆ ಸಹಕಾರಿಯಾಗುವ ವೈದ್ಯಕೀಯ, ಕಾನೂನು, ಶಿಕ್ಷಣ, ಪೋಲಿಸ್, ಪೈಲಟ್ ಮುಂತಾದ ವೇಷಭೂಷಣಗಳಲ್ಲಿ ಪುಟ್ಟ ಮಕ್ಕಳು ಆಗಮಿಸಿ, ತಮ್ಮ ವೃತ್ತಿ ಜೀವನದಲ್ಲಿ ಸಮುದಾಯಕ್ಕೆ ಹೇಗೆಲ್ಲಾ ನೆರವಾಗುತ್ತೇವೆ ಎಂಬುದನ್ನು ವಿವರಿಸಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹೇಶ್ ಬಾಬು, ಆಡಳಿತಾಧಿಕಾರಿ ರೂಪಸಿ ರಮೇಶ್, ಮುಖ್ಯ ಶಿಕ್ಷಕ ಶಿವಕುಮಾರ್, ಶಿಕ್ಷಕರಾದ ಮುಬೀನ, ಕಾವ್ಯ, ರೂಪ, ರವಿ, ಲಕ್ಷ್ಮಣ್, ಶರತ್ ಬಾಬು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.