ಚಿಕ್ಕಬಳ್ಳಾಪುರ: ಎಚ್.ಎನ್. ವ್ಯಾಲಿ ಯೋಜನೆಯಡಿ ತಾಲೂಕಿನ ಕಂದವಾರ ಕೆರೆಗೆ ಹರಿಸುವಲ್ಲಿ ಸಚಿವ ಸುಧಾಕರ್ ಪಾತ್ರವೇನು ಇಲ್ಲ. ಅವರು ಎಚ್.ಎನ್. ವ್ಯಾಲಿ ಯೋಜನೆಯ ಕುರಿತು ಯಾವುದೇ ಒಂದು ಸಭೆಗೂ ಹಾಜರಾಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಕಿಡಿಕಾರಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ‘ಜಿಲ್ಲೆಯ ಅಂತರ್ಜಲ ವೃದ್ಧಿಗಾಗಿ ಅಂದಿನ ಕಾಂಗ್ರೆಸ್ನ ಸಚಿವರಾಗಿದ್ದ ಕೃಷ್ಣ ಬೈರೇಗೌಡರು ರೂಪಿಸಿರುವ ಯೋಜನೆಯಾದ್ದು, ಸಿಎಂ ಆಗಿದ್ದ ಸಿದ್ದರಾಮಯ್ಯ ಅನುದಾನ ಬಿಡುಗಡೆಗೊಳಿಸಿ ಇಲ್ಲಿನ ರೈತರಿಗೆ ಅನುವು ಮಾಡಿಕೊಟ್ಟಿದ್ದಾರೆ. ಯೋಜನೆ ಅನುಷ್ಟಾನದಲ್ಲಿ ಮಾಜಿ ಸಚಿವರಾದ ಶಿವಶಂಕರರೆಡ್ಡಿ, ವಿ.ಮುನಿಯಪ್ಪ, ರಮೇಶ್ ಕುಮಾರ್ ಅವರ ಶ್ರಮ ಅಡಗಿದ್ದು, ಎಲ್ಲರಿಗೂ ಜಿಲ್ಲೆಯ ಜನತೆ ಪರ ಅಭಿನಂದನೆ ಸಲ್ಲಿಸುವುದಾಗಿ’ ತಿಳಿಸಿದರು.
ಆದೇಶ ಧಿಕ್ಕರಿಸಿ ಮೆರವಣಿಗೆ
ಕಾಂಗ್ರೆಸ್ ಮುಖಂಡ ಕೆ.ವಿ.ನವೀನ್ಕಿರಣ್ ಮಾತನಾಡಿ, ‘ಸಂವಿಧಾನದ ಆಶಯವನ್ನು ಎತ್ತಿಹಿಡಿಯಿವುದಾಗಿ ಗುರುವಾರವಷ್ಟೇ ಪ್ರಮಾಣ ಸ್ವೀಕರಿಸಿದ ಸಚಿವ ಡಾ.ಕೆ.ಸುಧಾಕರ್ ಚುನಾವಣಾ ಆಯೋಗದ ಆದೇಶವನ್ನೂ ಧಿಕ್ಕರಿಸಿ ನಗರದಲ್ಲಿ ಮೆರವಣಿಗೆಯನ್ನು ನಡೆಸಿ ಮತಯಾಚಿಸುವ ಮೂಲಕ ಕಾನೂನನ್ನು ಉಲ್ಲಂಘಿಸಿ ಸಚಿವ ಸ್ಥಾನಕ್ಕೆ ಚ್ಯುತಿ ತರುತ್ತಿದ್ದಾರೆ’ ಎಂದು ಆರೋಪಿಸಿದರು.
‘ಫೆ.09 ರಂದು ನಡೆಯಲಿರುವ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ನಡೆಯುವ 48 ಗಂಟೆಯೊಳಗೆ ಮೆರವಣಿಗೆ, ಸಭೆ ಸಮಾರಂಭ ನಡೆಸುವುದನ್ನು ನಿಷೇಧಿಸಿದ್ದರೂ, ಡಾ.ಕೆ.ಸುಧಾಕರ್ ನಗರದ ಹಲವು ವಾರ್ಡ್ಗಳಲ್ಲಿ ಮೆರವಣಿಗೆ ನಡೆಸಿ ಆಯೋಗದ ಆದೇಶವನ್ನು ಉಲ್ಲಂಘಿಸಿದ್ದಾರೆ. ಇನ್ನು ಈ ಕುರಿತು ಕ್ರಮ ಕೈಗೊಳ್ಳಬೇಕಿರುವ ಜಿಲ್ಲಾಡಳಿತ ಸಚಿವ ಸುಧಾಕರ್ ಅವರ ಕೈಗೊಂಬೆಯಂತೆ ವರ್ತಿಸುತ್ತಿದೆ’ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ನಂದಿ ಎಂ.ಆಂಜನಪ್ಪ, ನವೀನ್ ಕಿರಣ್, ವಿನಯ್ ಶ್ಯಾಮ್, ಎಂ.ಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.