
ಚೇಳೂರು: ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಸಂವಿಧಾನ ಜಾಗೃತಿ ಜಾಥಾವು ಎತ್ತಿನ ಬಂಡಿ ಮೂಲಕ ಗಡಿಗವಾರಹಳ್ಳಿ ಗ್ರಾಮಕ್ಕೆ ಪ್ರವೇಶಿಸಿತು. ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು.
ಶಾಲಾ ಮಕ್ಕಳು ವಿವಿಧ ರೀತಿಯ ವೇಷಭೂಷಣ ತೊಟ್ಟು ಕಾಲ್ನಡಿಗೆ ಹಾಗೂ ಎತ್ತಿನ ಗಾಡಿ ಮೂಲಕ ಸಂವಿಧಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.
ಶಾಲಾ ಪ್ರಾಂಶುಪಾಲರಾದ ನಾಗರತ್ನ ಡಿ.ವಿ ಮಾತನಾಡಿ, ಸಂವಿಧಾನ ಪೀಠಿಕೆ ಬೋಧನೆ ಮಾಡಿ ಸಾರ್ವಜನಿಕರಿಗೆ ಸಂವಿಧಾನದ ಮೌಲ್ಯ ತಿಳಿಸಲಾಗುತ್ತಿದೆ. ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವಂತಹ ವಾತಾವರಣ ನಿರ್ಮಾಣ ಮಾಡಲು ಸಂವಿಧಾನದ ಮಹತ್ವವನ್ನು ತಿಳಿಯಬೇಕು ಎಂದು ಹೇಳಿದರು.
ದಲಿತ ಸೇನೆ ಪ್ರಧಾನ ಕಾರ್ಯದರ್ಶಿ ದೇವರಾಜ್ ಎಂ. ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜತೆಗೆ ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ಮಹಾನ್ ನಾಯಕರ ಚರಿತ್ರೆ ಓದಬೇಕು ಎಂದರು.
ಕೆ.ವೆಂಕಟೇಶ್, ವಿ.ಮಂಜುನಾಥ, ವೆಂಕಟಲಕ್ಷ್ಮಮ್ಮ ಎಚ್., ಶರಣಪ್ಪ, ರೆಹಮಾನ್, ಅಕ್ಬರ್, ನಜ್ಮಾ, ಸಂಧ್ಯಾ, ನರೇಶ, ಶ್ರೀಕಾಂತ್, ಅಮಿತ್ ರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.