ADVERTISEMENT

ಚಿಕ್ಕಬಳ್ಳಾಪುರ: ಸಾಹಿತ್ಯದ ಬೆಳವಣಿಗೆಗೆ ಸಹಕಾರ ಅಗತ್ಯ

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಡಾ.ಕೋಡಿರಂಗಪ್ಪ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 4:31 IST
Last Updated 14 ಮಾರ್ಚ್ 2021, 4:31 IST
ಬಾಗೇಪಲ್ಲಿ ಪಟ್ಟಣದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರ ಚುನಾವಣಾ ಪೂರ್ವ ಸೌಹಾರ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಭಿಮಾನಿಗಳು
ಬಾಗೇಪಲ್ಲಿ ಪಟ್ಟಣದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರ ಚುನಾವಣಾ ಪೂರ್ವ ಸೌಹಾರ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಭಿಮಾನಿಗಳು   

ಬಾಗೇಪಲ್ಲಿ: ‘ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಹೋರಾಟಗಳಿಗೆ ಇತಿಹಾಸ ಇದೆ. ಅದನ್ನು ಉಳಿಸಿ, ಬೆಳೆಸಲು ಎಲ್ಲರ ಸಹಕಾರ ಅಗತ್ಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಕೋಡಿರಂಗಪ್ಪ ಹೇಳಿದರು.

ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣಾ ಪೂರ್ವ ಸೌಹಾರ್ದ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಅಭಿವೃದ್ಧಿಗೆ ಅನೇಕ ಮಹನೀಯರು ದುಡಿದಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ ಎಂ. ವಿಶ್ವೇಶ್ವರಯ್ಯ, ಡಾ.ಎಚ್. ನರಸಿಂಹಯ್ಯರಂತಹ ಮಹನೀಯರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ADVERTISEMENT

‘ವೃತ್ತಿಯಲ್ಲಿ ಶಿಕ್ಷಕ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದೇನೆ. ಜಿಲ್ಲೆಯ ಸಮಸ್ಯೆ, ಸವಾಲು, ಶಿಕ್ಷಣ, ಆರೋಗ್ಯ, ಉದ್ಯೋಗ, ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಸಮಗ್ರವಾಗಿ ಚಿಂತನೆ ಮಾಡಿದ್ದೇನೆ. ಮಕ್ಕಳ ಶಿಕ್ಷಣದ ಮಟ್ಟದ ಬಗ್ಗೆ ಅಧ್ಯಯನ ಮಾಡಲಾಗಿದೆ’ ಎಂದು ಹೇಳಿದರು.

‘ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂದು ಜಿಲ್ಲಾ ಸಾಹಿತ್ಯಾಭಿಮಾನಿಗಳು ಕೋರಿಕೆ ಇಟ್ಟಿದ್ದಾರೆ. ನನ್ನ ಮೇಲೆ ವಿಶ್ವಾಸ ಇರಿಸಿದ್ದಾರೆ. ಇದರಿಂದ ಅನಿವಾರ್ಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ’ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಜಿ. ಸುಧಾಕರ್ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಇತಿಹಾಸ ಇದೆ. ಅನೇಕ ಮಹನೀಯರು ಸಾಹಿತ್ಯವನ್ನು ಉಳಿಸಿ, ಬೆಳೆಸಲು ಅವಿರತ ಶ್ರಮ ಹಾಕಿದ್ದಾರೆ. ಆದರೆ, ಕೆಲವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಏಕವ್ಯಕ್ತಿಯಾಗಿ ಚಲಾವಣೆ ಮಾಡಿರುವುದು ಸರಿಯಲ್ಲ ಎಂದು ಟೀಕಿಸಿದರು.

ಸಭೆಯಲ್ಲಿ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಡಾ.ರಾಮಯ್ಯ, ಸಾಹಿತಿಗಳಾದ ಗೋಪಾಲಗೌಡ ಕಲ್ವಮಂಜಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹನುಮಂತರಾವ್, ಸಾಹಿತ್ಯಾಭಿಮಾನಿಗಳಾದ ಮುನಿರಾಜು, ಮಂಚನಬಲೆ ಶ್ರೀನಿವಾಸ್, ಯಲುವಳ್ಳಿ ಸೊಣ್ಣೇಗೌಡ, ಚಲಪತಿಗೌಡ, ಸುಷ್ಮಾ ಶ್ರೀನಿವಾಸ್, ಆರ್. ಹನುಮಂತರೆಡ್ಡಿ, ಡಾ.ಚಿನ್ನಕೈವಾರಮಯ್ಯ, ಎಸ್. ಮುನಿರಾಮಯ್ಯ, ಬಿ.ಎಂ. ನಾಗಭೂಷಣಾರಾಧ್ಯ, ಉಮೇಶ್ ಭಾವಿಕಟ್ಟಿ, ಮುನಿರಾಜು, ಎಂ.ಸಿ. ನಂಜುಂಡಪ್ಪ, ಶ್ರೀನಿವಾಸನಾಯ್ಡು, ಬಿ.ಎಸ್. ನಾರಾಯಣಸ್ವಾಮಿ, ಭಾಗ್ಯನಗರ ಶ್ರೀನಿವಾಸ್, ವಿ. ಅಶ್ವಥ್ಥನಾರಾಯಣ, ವಿ. ಸುಕನ್ಯಾ, ಧರ್ಮಪುತ್ರಿ, ರಾಜೇಶ್ವರಿಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.