ADVERTISEMENT

ಕೊರೊನಾ ಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 1:56 IST
Last Updated 13 ನವೆಂಬರ್ 2020, 1:56 IST
ಚಿಂತಾಮಣಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಎಚ್.ಎಸ್. ಮಂಜುನಾಥ್, ಕೆ.ಎಂ. ರಾಜೇಂದ್ರಕುಮಾರ್, ಜಿ.ಜೆ. ಶಿವಕುಮಾರ್ ಭಾಗವಹಿಸಿದ್ದರು
ಚಿಂತಾಮಣಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಎಚ್.ಎಸ್. ಮಂಜುನಾಥ್, ಕೆ.ಎಂ. ರಾಜೇಂದ್ರಕುಮಾರ್, ಜಿ.ಜೆ. ಶಿವಕುಮಾರ್ ಭಾಗವಹಿಸಿದ್ದರು   

ಚಿಂತಾಮಣಿ: ‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷ ದೀಪಾವಳಿಯನ್ನು ಪಟಾಕಿ ಇಲ್ಲದೆ ಸರಳವಾಗಿ ಆಚರಿಸಬೇಕು’ ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಚ್.ಎಸ್. ಮಂಜುನಾಥ್ ಸಲಹೆ ನೀಡಿದರು.

ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘವು ನಗರದ ಬೆಂಗಳೂರು ವೃತ್ತದ ಬಳಿ ಗುರುವಾರ ಹಮ್ಮಿಕೊಂಡಿದ್ದ ಕೊರೊನಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊರೊನಾ ಸೋಂಕಿನ ಕುರಿತು ಭಯ ಮತ್ತು ಉದಾಸೀನತೆ ತಪ್ಪು. ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು ಎಂದರು.

ADVERTISEMENT

ಪಟಾಕಿ ಹಚ್ಚುವುದರಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ ಉಂಟಾಗಿ ಪರಿಸರ ಹಾಳಾಗುತ್ತದೆ. ಮಾಲಿನ್ಯದಿಂದ ಉಸಿರಾಟಕ್ಕೆ ತೊಂದರೆಯಾಗಿ ಕೊರೊನಾ ಸೋಂಕು ಹೆಚ್ಚಾಗುತ್ತದೆ. ಮಾರ್ಗಸೂಚಿ ಪಾಲಿಸದ ಸಾರ್ವಜನಿಕರಿಗೆ ದಂಡ ಹಾಕಿ ತೊಂದರೆ ನೀಡುವುದು ಉದ್ದೇಶವಲ್ಲ. ಜನರ ಜೀವನ ಕಾಪಾಡಬೇಕು. ಜೀವನಕ್ಕೆ ತೊಂದರೆಯಾಗಬಾರದು ಎಂಬುದು ಈ ಜಾಗೃತಿ ಅಭಿಯಾನದ ಉದ್ದೇಶವಾಗಿದೆ ಎಂದರು.

ಜೆಎಂಎಫ್‌ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ. ರಾಜೇಂದ್ರ ಮಾತನಾಡಿ, ಅಂಗಡಿಮುಂಗಟ್ಟುಗಳು, ಮಾರುಕಟ್ಟೆ, ಬಸ್‌ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ನಗರಸಭೆ, ಪೊಲೀಸ್, ಕಂದಾಯ ಇಲಾಖೆಯ ಅಧಿಕಾರಿಗಳು ಅನಿರೀಕ್ಷಿತವಾಗಿ ತನಿಖೆ ನಡೆಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ಚಳಿಗಾಲದ ಹಿನ್ನೆಲೆಯಲ್ಲಿ ಮುಂದಿನ 2ರಿಂದ 3 ತಿಂಗಳು ಕಠಿಣವಾಗಿವೆ ಎಂದು ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲರೂ ಸಹಕಾರ ನೀಡಬೇಕು ಎಂದರು.

ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಿಸಲಾಯಿತು. ಸಿವಿಲ್ ನ್ಯಾಯಾಧೀಶ ಜಿ.ಜೆ. ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಸ್. ರಾಜಾರಾಂ, ಉಪಾಧ್ಯಕ್ಷ ಶಿವಾನಂದ, ನಗರಸಭೆ ಪೌರಾಯುಕ್ತ ಉಮಾಶಂಕರ್, ನಗರ ಠಾಣೆಯ ಇನ್‌ಸ್ಪೆಕ್ಟರ್ ಆನಂದ್, ಸಬ್ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ, ವಕೀಲ ಚಂದು, ರಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.