ADVERTISEMENT

ಚಿಕ್ಕಬಳ್ಳಾಪುರ | ಆಯುಕ್ತರಿಗೆ ಸೋಂಕು: ಬೆಚ್ಚಿದ ನೌಕರರು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 19 ಮಂದಿಗೆ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 7:40 IST
Last Updated 11 ಜುಲೈ 2020, 7:40 IST
ಆಯುಕ್ತರಿಗೆ ಸೋಂಕು ದೃಢಪಟ್ಟ ಕಾರಣ ನಗರಸಭೆ ಕಾರ್ಯಾಲಯವನ್ನು‌ ಸೀಲ್‌ಡೌನ್ ಮಾಡಿರುವುದು
ಆಯುಕ್ತರಿಗೆ ಸೋಂಕು ದೃಢಪಟ್ಟ ಕಾರಣ ನಗರಸಭೆ ಕಾರ್ಯಾಲಯವನ್ನು‌ ಸೀಲ್‌ಡೌನ್ ಮಾಡಿರುವುದು   

ಚಿಕ್ಕಬಳ್ಳಾಪುರ: ನಗರಸಭೆ ಆಯುಕ್ತರಿಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ದೃಢವಾಗಿದೆ. ಇದರಿಂದ ಅವರ ಸಂಪರ್ಕದಲ್ಲಿದ್ದ ನಗರಸಭೆ ಸಿಬ್ಬಂದಿ ಹಾಗೂ ಇತರ ಅಧಿಕಾರಿಗಳನ್ನು‌ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ನಗರಸಭೆ ಕಾರ್ಯಾಲಯವನ್ನು ಸೀಲ್‌ಡೌನ್ ಮಾಡಲಾಗಿದೆ. ಇದರಿಂದ ನೌಕರರು ‌ಬೆಚ್ಚಿಬಿದ್ದಿದ್ದಾರೆ.

ಕಳೆದ 2-3 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಆಯುಕ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ರಾಮೀಣಾಭಿವೃದ್ಧಿ ‌ಸಂಸ್ಥೆಯಿಂದ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳ ಸಾಮರ್ಥ್ಯ ವೃದ್ಧಿಸುವ ತರಬೇತಿಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನದ ವೇಳೆಗೆ ಆಯುಕ್ತರ ಕೋವಿಡ್– 19 ಪರೀಕ್ಷೆಯು ಪಾಸಿಟಿವ್ ಫಲಿತಾಂಶ ಎಂಬ ವಿಷಯ ಹೊರ ಬಿದ್ದಿದೆ. ಇದರಿಂದ ತರಬೇತಿಯಲ್ಲಿದ್ದ ಇತರ ಅಧಿಕಾರಿಗಳು ಒಂದು ಕ್ಷಣ ನಿಟ್ಟುಸಿರು‌ ಬಿಡುವಂತಾಗಿದೆ. ಕೂಡಲೇ ಎಚ್ಚೆತ್ತ ಜಿಲ್ಲಾ ಆರೋಗ್ಯ ಇಲಾಖೆ ತರಬೇತಿಯಲ್ಲಿದ್ದ ಅಧಿಕಾರಿಗಳ ಗಂಟಲುಸ್ರಾವವನ್ನು ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಷಯ ತಿಳಿದ ಕೂಡಲೇ ನಗರಸಭೆ ಕಚೇರಿಯಲ್ಲಿದ್ದ ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂದಿ ಹೊರಬಂದ ಬಳಿಕ ನಗರಸಭೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆಯುಕ್ತರ ಪ್ರಯಾಣ ದಾಖಲೆ ಪಡೆಯಲು ಆರೋಗ್ಯ ಅಧಿಕಾರಿಗಳು ಮುಂದಾಗಿದ್ದಾರೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆ.

ADVERTISEMENT

ಶುಕ್ರವಾರ ಜಿಲ್ಲಾ ಕೇಂದ್ರದಲ್ಲಿ‌ ನಡೆದ ಈ ಘಟನೆಯಿಂದ ನಗರ ಸೇರಿದಂತೆ ಇಡೀ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಉಳಿದಂತೆ ಅವರೊಂದಿಗೆ ಸಂಪರ್ಕದಲ್ಲಿದ್ದ ಇತರ ಇಲಾಖೆಗಳ‌ ಅಧಿಕಾರಿಗಳು ಸೋಂಕು ಹರಡುವ ಭೀತಿಯಲ್ಲಿದ್ದಾರೆ
ಎನ್ನಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.